ಕೊಪ್ಪಳ: ದಶಕದ ಹಿಂದೆ ರಾಜ್ಯದ ರಾಜಕಾರಣದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದ ಅಂತಿಮ ಆದೇಶ ಇಲ್ಲಿನ ಜಿಲ್ಲಾ ನ್ಯಾಯಾಲಯದಿಂದ ಶುಕ್ರವಾರ ಪ್ರಕಟವಾಗಿದ್ದು, ಎಲ್ಲ ಒಂಬತ್ತು ಜನ ಆರೋಪಿಗಳನ್ನು ನಿರಪರಾಧಿಗಳು ಎಂದು ನ್ಯಾಯಾಲಯ ಆದೇಶ ನೀಡಿದೆ.
ಆಗಲೂ ಸಚಿವರಾಗಿದ್ದ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಿವರಾಜ ತಂಗಡಗಿ ರಾಜೀನಾಮೆಗೂ ಯಲ್ಲಾಲಿಂಗನ ಕೊಲೆ ಪ್ರಕರಣ ಕಾರಣವಾಗಿತ್ತು. ಜಿಲ್ಲಾ ನ್ಯಾಯಾಲಯ ಸೆ. 24ರಂದು ಪ್ರಕರಣದ ಅಂತಿಮ ವಿಚಾರಣೆ ನಡೆಸಿತ್ತು.
ರಾಜಕೀಯ ಷಡ್ಯಂತ್ರದ ಕಾರಣಕ್ಕೆ ಒಂಬತ್ತು ಜನರ ಮೇಲೆ ಕೊಲೆ ಆರೋಪ ಹೊರಿಸಲಾಗಿತ್ತು. ಇದು ನಿರಾಧಾರ ಎಂದು ನ್ಯಾಯಾಲಯ ಹೇಳಿದ್ದು, ಯಲ್ಲಾಲಿಂಗನದ್ದು ಕೊಲೆ ಅಲ್ಲ; ಆತ್ಮಹತ್ಯೆ ಎಂದು ಅವರ ಸ್ವಂತ ಸಹೋದರನೇ ಹೇಳಿದ್ದರು. ಈ ಎಲ್ಲ ಅಂಶಗಳನ್ನು ಗಮನಿಸಿ ನ್ಯಾಯಾಲಯ ಅವರನ್ನು ನಿರ್ದೋಷಿ ಎಂದು ಹೇಳಿದೆ ಎಂದು ಆರೋಪಿಗಳು ಎನಿಸಿದ್ದವರ ಪರ ವಕೀಲ ಗಂಗಾಧರ ಮಾಧ್ಯಮಗಳಿಗೆ ತಿಳಿಸಿದರು.
ಪ್ರಕರಣದ ಆರೋಪಿಗಳಾಗಿದ್ದ ಕಾಂಗ್ರೆಸ್ ಮುಖಂಡ ಹನುಮೇಶ ನಾಯಕ, ಬಾಳನಗೌಡ, ಕಾಡಮಂಜ, ಮಹಾಂತೇಶ ನಾಯಕ, ಮನೋಜ ಪಾಟೀಲ್, ನಂದೀಶ, ಪರಶುರಾಮ, ಯಮನೂರಪ್ಪ ಹಾಗೂ ದುರ್ಗಪ್ಪ ಅವರ ಮೇಲೆ ಕೊಲೆ ಆರೋಪ ಬಂದಿತ್ತು.
ಏನಿದು ಘಟನೆ: ಕನಕಗಿರಿ ತಾಲ್ಲೂಕಿನ ಕನಕಾಪುರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗ ತಮ್ಮ ಗ್ರಾಮದಲ್ಲಿ ನಡೆದಿದ್ದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದ. ಇದಾದ ಬಳಿಕ 2015ರ ಜನವರಿ 11ರಂದು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಯಲ್ಲಾಲಿಂಗನ ಮೃತದೇಹ ಪತ್ತೆಯಾಗಿತ್ತು.
ಇದು ಮೊದಲು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದರೂ ನಂತರ ಕೊಲೆ ಎಂದು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಚಿವ ಶಿವರಾಜ ತಂಗಡಗಿ ಆಪ್ತ ಹನಮೇಶ ನಾಯಕ ಸೇರಿ 9 ಜನರ ವಿರುದ್ಧ ಇಲ್ಲಿ ಪ್ರಕರಣ ದಾಖಲಾಗಿತ್ತು. ಯಲ್ಲಾಲಿಂಗನ ಸಾವಿಗೆ ನ್ಯಾಯ ಒದಗಿಸುವಂತೆ ದೊಡ್ಡ ಮಟ್ಟದಲ್ಲಿ ಹೋರಾಟಗಳು ಕೂಡ ನಡೆದಿದ್ದರಿಂದ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿ ಸಚಿವ ಶಿವರಾಜ ತಂಗಡಗಿ ಸಂಪುಟದಿಂದ ಹೊರಬೀಳುವಂತಾಗಿತ್ತು. ಸುದೀರ್ಘ ಹತ್ತು ವರ್ಷಗಳ ವಿಚಾರಣೆ ನಡೆದಿದ್ದು ಈಗ ನ್ಯಾಯಾಲಯದ ಈ ಆದೇಶ ನೀಡಿದೆ.
ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿತ್ತು. ನಂತರ ಆರೋಪಿಗಳಿಗೆ ಜಾಮೀನು ದೊರೆತಿತ್ತು. 2021ರಲ್ಲಿ ಆರೋಪಿ ಮಹಾಂತೇಶ್ ನಾಯಕನ ಮದುವೆಯಲ್ಲಿ ಪೊಲೀಸರು ಭಾಗವಹಿಸಿದ್ದರಿಂದ ಪ್ರಕರಣ ಮತ್ತೆ ಮುನ್ನಲೆಗೆ ಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.