ಸುಬುಧೇಂದ್ರ ಶ್ರೀ
ಕೊಪ್ಪಳ: ಬುಧವಾರ ತಡರಾತ್ರಿ ಇಲ್ಲಿನ ರಾಯರ ಮಠದ ಆಸ್ತಿ ವಿಚಾರವಾಗಿ ನಡೆದ ವಾಗ್ವಾದದಿಂದಾಗಿ ಬೇಸರಗೊಂಡ ಸುಬುಧೇಂದ್ರ ಶ್ರೀಗಳು ಗುರುವಾರ ನಡೆಯಬೇಕಿದ್ದ ಪೂಜಾ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ವಾಪಸ್ ತೆರಳಿದರು.
ಗುರುವಾರ ರಾಯರ ಮಠದ ಮುಂಭಾಗಕ್ಕೆ ಬಂದ ಶ್ರೀಗಳು ಹೊರಗಿನಿಂದಲೇ ರಾಯರ ವೃಂದಾವನಕ್ಕೆ ಕೈ ಮುಗಿದು ವಾಪಸ್ ಹೋದರು.
ಶ್ರೀಗಳು ಗುರುವಾರ ಸಾಮೂಹಿಕ ಪಾದಪೂಜೆ, ಮೂಲರಾಮದೇವರ ಪೂಜೆ, ಹಸ್ತೋದಕ, ತೀರ್ಥಪ್ರಸಾದ ಮತ್ತು ಸಂಜೆ ತುಲಾಭಾರ ಕಾರ್ಯಕ್ರಮ ನಿಗದಿಯಾಗಿತ್ತು. ಇವುಗಳೆಲ್ಲವನ್ನೂ ಮೊಟಕುಗೊಳಿಸಲಾಯಿತು.
ವಾಪಸ್ ತೆರಳುವ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು ಬುಧವಾರ ರಾತ್ರಿ ಕೊಪ್ಪಳದ ರಾಯರ ಮಠದಲ್ಲಿ ಪ್ರವಚನ ನೀಡಿದ್ದೇನೆ. ಎಲ್ಲರಿಗೂ ಒಳಿತಾಗಲಿ ಎಂದರು.
ಕೊಪ್ಪಳದ ರಾಯರ ಮಠದಲ್ಲಿ ನಿಗದಿಯಾಗಿದ್ದ ಶ್ರೀಗಳ ಪೂಜಾ ಕಾರ್ಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ರಾಯರ ಮಠದಲ್ಲಿ ನಿಗದಿಯಾಗಿದೆ.
ಕೊಪ್ಪಳ ರಾಯರ ಮಠದ ವ್ಯವಸ್ಥಾಪಕ ಜಗನ್ನಾಥ ಹುನಗುಂದ ಪ್ರತಿಕ್ರಿಯೆ ನೀಡಿ ಇದು ಆಂತರಿಕ ವಿಚಾರವಾಗಿದ್ದು ನಾವು ಪರಿಹರಿಸಿಕೊಳ್ಳುತ್ತೇವೆ. ಮಂತ್ರಾಲಯದ ಶ್ರೀಗಳು ಮತ್ತೆ ಕೊಪ್ಪಳಕ್ಕೆ ಪೂಜೆ ಸಲ್ಲಿಸಬೇಕು ಎನ್ನುವುದು ನಮ್ಮ ಬಯಕೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.