ಕೊಪ್ಪಳ: ತಾಲ್ಲೂಕಿನ ಅಳವಂಡಿಯ ಕಟ್ಟಿಮನಿ ಸಂಸ್ಥಾನ ಹಿರೇಮಠಮತ್ತು ಸಿದ್ಧೇಶ್ವರಮಠದ ಪೀಠಾಧ್ಯಕ್ಷಮರು
ಳಾರಾಧ್ಯ ಶಿವಾಚಾರ್ಯಸ್ವಾಮೀಜಿ ಅಧ್ಯಾತ್ಮ, ಆಯುರ್ವೇದ, ಯೋಗದಲ್ಲಿ ಸಾಧನೆ ಮಾಡಿ ಭಕ್ತರ ಮನಗೆದ್ದಿದ್ದಾರೆ.
ಉಜ್ಜಯಿನಿ ಪೀಠ ಪರಂಪರೆಯಲ್ಲಿ ಬರುವ ಈ ಶಾಖಾ ಮಠಕ್ಕೆ ಈಚೆಗೆ ನಿಯುಕ್ತಿಗೊಂಡು ಪಾಠ, ಪ್ರವಚನದ ಜತೆಗೆ ವಿಶಿಷ್ಟವಾದ ಧರ್ಮ ಮಾರ್ಗದ ಮೂಲಕ ಗಮನ ಸೆಳೆಯುತ್ತಿದ್ದಾರೆ. ವಿವಿಧ ಯೋಗಾಸನದ ವಿವಿಧ ಭಂಗಿಗಳನ್ನು ಕರತಾಲಮಲಕ ಮಾಡಿಕೊಂಡಿರುವ ಶ್ರೀಗಳು ಸರಾಗವಾಗಿ ಮಾಡಿ ನೋಡುಗರನ್ನು ಆಶ್ಚರ್ಯ ಚಕಿತರಾಗುವಂತೆ ಮಾಡುತ್ತಾರೆ.
ಶರೀರದ, ಮನಸ್ಸಿನ ಮತ್ತು ಆತ್ಮದ ಸರ್ವಶಕ್ತಿಗಳನ್ನೂ ಭಗವಂತನೊಡನೆ ಸಂಯೋಜಿಸುವುದೇಒಂದು ಯೋಗಾ ಯೋಗ ಎಂದು ನಂಬಿರುವ ಅವರು ನಿತ್ಯ ಯೋಗ ಮಾಡುವ ಮೂಲಕ ಪೂಜೆ, ಜಪ, ತಪದ ಜತೆಗೆ ಭಕ್ತರ ಹಿತ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾನಗಲ್ಲ ಗುರುಕುಮಾರೇಶ್ವರರು ಸ್ಥಾಪಿಸಿದ ಬಾದಾಮಿಯ ಶಿವಯೋಗ ಮಂದಿರದಲ್ಲಿ ಚಿಕ್ಕಂದಿನಿಂದಲೇ ಶಿಕ್ಷಣ ಪಡೆದ ಅವರು ಅಲ್ಲಿಯೇ ಯೋಗ ಸಿದ್ಧಿಸಿಕೊಂಡವರು.
ಯೋಗದ ಜೊತೆಗೆ ಶಿವಯೋಗ, ಅಷ್ಟಾಂಗ ಯೋಗ, ಧ್ಯಾನ, ಪ್ರಾಣಾಯಾಮ, ಇನ್ನೂ ಅನೇಕ ವಿಧವಾದ ಆಧ್ಯಾತ್ಮಿಕ ಯೋಗ ಸಾಧನೆಯನ್ನು ನಾಡಿನ ಅನೇಕ ಹಿರಿಯ ಪೂಜ್ಯರೊಂದಿಗೆ ಸಾಧಕರೊಂದಿಗೆ ನಡೆಸಿದರು. ಸಾಗರ ತಾಲ್ಲೂಕಿನ ವೀರಾಪುರ ಹಿರೇಮಠದಲ್ಲಿ ಡಾ.ಮರುಳಸಿದ್ಧ ಪಂಡಿತಾರಾಧ್ಶ ಶಿವಾಚಾರ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಹೆಚ್ಚಿನ ಯೋಗಾಭ್ಯಾಸ ನಡೆಸಿದರು.
ನಾಡಿನ ಅನೇಕ ಭಾಗಗಳಲ್ಲಿ ಯೋಗ ತರಗತಿಯನ್ನು ನಡೆಸಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶನ ನೀಡಿದರು. ಅಳವಂಡಿ ಶ್ರೀಮಠದ ಪಟ್ಟಾಧ್ಯಕ್ಷರಾದ ನಂತರ ಅಳವಂಡಿ ಗ್ರಾಮದ ನೂರಾರು ಮಕ್ಕಳಿಗೆ ಯೋಗ ತರಬೇತಿ ನೀಡುತ್ತಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಶ್ರೀಗಳು,‘ಮನುಷ್ಯನ ಜೀವನದ ಪರಮೋಚ್ಛ ಗುರಿಯೇ ಆಧ್ಯಾತ್ಮಿಕವಾಗಿ ಪರಿಪೂರ್ಣವಾಗುವುದು. ಭಾರತೀಯ ಸಾಂಪ್ರದಾಯಿಕ, ಪುಣ್ಯಭೂಮಿಯಲ್ಲಿ ನೆಲೆನಿಂತ ನಾವು ಮುಕ್ತಿ ಪಡೆಯುವುದರ ಕುರಿತು, ಭಗವಂತನನ್ನು ಸೇರುವುದರ ಕುರಿತು ಆಲೋಚಿಸುತ್ತೇವೆ. ದೈವಿ ಭಾವವನ್ನು ಸದಾ ನಂಬುವ ನಮಗೆ ಮುಕ್ತಿ ಪರಮೋಚ್ಚ ಗುರಿಯಾಗಿದೆ. ಇಂಥ ಆಧ್ಯಾತ್ಮಿಕತೆಯನ್ನು ಆಶಿಸುವ ನಮಗೆ ಯೋಗ ವರಪ್ರದಾಯಕವಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.