ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮದ ಚಿಂತಾಮಣಿ ಸಮೀಪ ಮನೆಯೊಂದರಲ್ಲಿ ಸ್ವಿಜರ್ಲ್ಯಾಂಡ್ ಪ್ರವಾಸಿ ಮಾರ್ಟಿನ್ ಅವರು ಗೌರಿ–ಗಣೇಶ ಮೂರ್ತಿಯನ್ನು ಒಂದು ದಿನದ ಮಟ್ಟಿಗೆ ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸುವ ಮೂಲಕ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಮಾರ್ಟಿನ್ ಅವರು, ಮೆಹಬೂಬ್ ಅವರ ಮನೆ ಬಾಡಿಗೆ ಪಡೆದು, ಒಂದು ವರ್ಷದಿಂದ ಇಲ್ಲಿಯೇ ವಾಸಿಸುತ್ತಿದ್ದಾರೆ. ಸ್ಥಳೀಯರ ಬದುಕು, ಹಬ್ಬ, ಆಚರಣೆ, ಧಾರ್ಮಿಕ ಪದ್ಧತಿ, ಉಡುಗೆ–ತೊಡುಗೆ, ಸಂಸ್ಕೃತಿ, ಸಂಪ್ರದಾಯಕ್ಕೆ ಮನಸೋತಿದ್ದಾರೆ. ಅದರ ಭಾಗವಾಗಿಯೇ ಹಿಂದೂ ಧರ್ಮದ ಹಬ್ಬ–ಆಚರಣೆಗಳಿಗೆ ಆದ್ಯತೆ ನೀಡಿದ್ದಾರೆ. ಗೌರಿ–ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಬಾಳೆಕಂದು, ತಾಳೆ ಗರಿ, ಹೂವುಗಳಿಂದ ಅಲಂಕರಿಸಿ, ಪೂಜೆ ನೆರವೇರಿಸಿದ್ದಾರೆ.
ಸಂಜೆ ತರಕಾರಿ ಬಂಡಿಯಲ್ಲಿ ಸ್ಪೀಕರ್ ಇರಿಸಿಕೊಂಡು, ಹಾಡು ಹಾಕಿಕೊಂಡು, ಪಟಾಕಿ ಸಿಡಿಸುತ್ತ, ಚಿಣ್ಣರ ಜೊತೆ ನೃತ್ಯ ಮಾಡುತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಚಿಂತಾಮಣಿ ಬಳಿ ತುಂಗಭದ್ರಾ ನದಿಯಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡಿದ್ದಾರೆ.
‘ನನ್ನ ದೇಶದಿಂದ ಭಾರತಕ್ಕೆ ಬಂದು ಆನೆಗೊಂದಿಯಲ್ಲಿ ನೆಲೆಸಿದ ಬಳಿಕ ನೆಮ್ಮದಿಯಿಂದ ಇದ್ದೇನೆ. ಹಿಂದೂ ಸಂಸ್ಕೃತಿ, ಸಂಪ್ರದಾಯ, ಹಬ್ಬಗಳನ್ನು ಆಚರಿಸುವುದು ನನಗೆ ಇಷ್ಟ. ಗಣೇಶ ಹಬ್ಬ ಆಚರಿಸಿರುವುದು ಖುಷಿ ನೀಡಿದೆ. ಸ್ಥಳೀಯರ ಸಹಕಾರದಿಂದ ಗೌರಿ–ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದೇನೆ. ದೇವರ ದಯೆಯಿಂದ ಇಲ್ಲಿ ನನಗೆ ಸಾಕಷ್ಟು ಒಳೆಯದಾಗಿದೆ’ ಎಂದು ಮಾರ್ಟಿನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.