ಕನಕಗಿರಿ: ಸಮೀಪದ ಗೌರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತಾಂಡದಲ್ಲಿ ನರೇಗಾ ಯೋಜನೆಯ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಈಚೆಗೆ ಭೇಟಿ ನೀಡಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕಾವ್ಯರಾಣಿ ಅವರು ಲಂಬಾಣಿ ಕಾರ್ಮಿಕ ಮಹಿಳೆಯರ ನೃತ್ಯಕ್ಕೆ ಹೆಜ್ಜೆಹಾಕಿದರು.
ವಿಶ್ರಾಂತಿ ಸಮಯದಲ್ಲಿ ಲಂಬಾಣಿ ಕೂಲಿಕಾರರ ಗಾಯನಕ್ಕೆ ಮನಸೋತ ಇಒ ಕಾವ್ಯರಾಣಿ ಮಹಿಳೆಯರ ಜತೆ ಸೇರಿ ನೃತ್ಯ ಮಾಡಿ ಗಮನ ಸೆಳೆದರು.
ನಂತರ ರೋಜಗಾರ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕಾವ್ಯರಾಣಿ, ಜನ ಜಾಗೃತಿಗೆ ರೋಜಗಾರ್ ದಿನಾಚರಣೆ ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಜನರು ನರೇಗಾ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಈಗ ಕೂಲಿಕಾರನಿಗೆ ಈಗ ದಿನಕ್ಕೆ 309 ರೂಪಾಯಿ ನೀಡಲಾಗುತ್ತಿದೆ. ಕೂಲಿಕಾರರಿಗೆ ಕೆಲಸ ಒದಗಿಸುವ ಉದ್ದೇಶದಿಂದ ರೋಜಗಾರ್ ದಿನಾಚರಣೆ ಅಭಿಯಾನವನ್ನು ನಡೆಸಲಾಗುತ್ತಿದೆ. ಕೂಲಿಕಾರರು ಗುಳೆ ಹೋಗುವ ಬದಲಾಗಿ ನರೇಗಾ ಕೆಲಸದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಪಿಡಿಒ ನಾಗಲಿಂಗಪ್ಪ, ತಾಂತ್ರಿಕ ಸಂಯೋಜಕ ತನ್ವೀರ್, ತಾಂತ್ರಿಕ ಸಹಾಯಕ ಮಂಜುನಾಥ, ಕರ ವಸೂಲಿಗಾರರಾದ ವಿಜಯಕುಮಾರ, ಮೋಹನ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.