
ಕೊಪ್ಪಳ: ‘ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಅರಾಜಕತೆ ತಾಂಡವಾಡುತ್ತಿದ್ದು, ಇತರೆ ರಾಜ್ಯಗಳಂತೆ ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಅಧಿಕಾರದಿಂದ ನೆಗೆದುಬಿದ್ದು ಹೋಗಲಿದ್ದಾರೆ’ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಗುರುವಾರ ಇಲ್ಲಿಯ ಗವಿಸಿದ್ದೇಶ್ವರ ಮಠದಲ್ಲಿ ಸ್ವಾಮೀಜಿ ಅವರನ್ನು ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡಿದರು.
‘ಸಿದ್ದರಾಮಯ್ಯ ಇತ್ತೀಚಿನ ದಿನಗಳಲ್ಲಿ ಅತ್ಯಂತ ದುರ್ಬಲರಾಗಿದ್ದಾರೆ ಎಂಬುದಕ್ಕೆ ಅವರ ನಡುವಳಿಕೆಯಿಂದ ವೇದ್ಯವಾಗುತ್ತದೆ. ಇತ್ತೀಚಿನವರೆಗೂ ತಾನೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎನ್ನುತ್ತಿದ್ದವರು ಈಗ ಏಕಾಏಕಿ ರಾಗ ಬದಲಾಯಿಸಿ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎನ್ನುತ್ತಿದ್ದಾರೆ. ಅಂದರೆ ಹಿಂದೆ ಮಾತನಾಡುವಾಗ ಹೈಕಮಾಂಡ್ ಲೆಕ್ಕಕ್ಕಿರಲಿಲ್ಲವೆ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ಓಲೈಕೆ ರಾಜಕಾರಣದಲ್ಲಿ ನಿಸ್ಸೀಮರಾಗಿದ್ದಾರೆ. ಹಿಂದುಳಿದವರ ಮೂಗಿಗೆ ತುಪ್ಪ, ದಲಿತರಿಗೆ ತುಪ್ಪ, ಇನ್ನು ಮುಸಲ್ಮಾನರಿಗೆ ಮಾತ್ರ ಜೇನುತುಪ್ಪ ಈ ನೀತಿ ಅನುಸರಿಸುತ್ತಿರುವ ಸಿದ್ದರಾಮಯ್ಯ ಆಟ ಬಹಳದಿನ ನಡೆಯುವುದಿಲ್ಲ. ಜಾತಿಗಣತಿ ನೆಪದಲ್ಲಿ ರಾಜ್ಯದ ಬೊಕ್ಕಸದ ₹163 ಕೋಟಿ ಹಳ್ಳಕ್ಕೆ ಹೋಯಿತು. ಮುಖ್ಯಮಂತ್ರಿ ಸ್ಥಾನ ಹೋದರೂ ಸರಿ ಹಿಂದುಳಿದ ಆಯೋಗದ ವರದಿ ಜಾರಿಗೆ ತರುತ್ತೇನೆ ಎನ್ನುತ್ತಿದ್ದವರು ಈಗೇನು ಮಾಡುತ್ತಿದ್ದಾರೆ’ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಅಧಿಕಾರ ಹಂಚಿಕೆಗೆ ಬದ್ಧರಾಗುವರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,‘ಅದು ಹೈಕಮಾಂಡ್ ತಾಕತ್ತು ಅವಲಂಬಿಸಿರುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ನನ್ನನ್ನು ಏನೂ ಕೇಳಬೇಡಿ ಹೈಕಮಾಂಡ್ ಅನ್ನೇ ಕೇಳಿ’ ಎಂದು ಹೇಳುವ ಮೂಲಕ ತಾವೊಬ್ಬ ರಬ್ಬರ್ ಸ್ಟಾಂಪ್ ಎಂಬುದನ್ನು ಖರ್ಗೆ ಸ್ವತಃ ಒಪ್ಪಿಕೊಂಡಂತಾಗಿದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಉಳಿಯುವುದಿಲ್ಲ. ಇಡೀ ದೇಶದಲ್ಲಿ ಇರುವಂತೆ ಆ ಪಕ್ಷದ ಸ್ಥಿತಿ ಕರ್ನಾಟಕಕ್ಕೂ ಬಂದು ಕಾಂಗ್ರೆಸ್ ನಿರ್ನಾಮ ಆಗಲಿದೆ’ ಎಂದು ಈಶ್ವರಪ್ಪ ಭವಿಷ್ಯ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.