ADVERTISEMENT

ಕೆಲಸ ಮಾಡದವರಿಂದ ಹೇಳಿಸಿಕೊಳ್ಳಬೇಕಿಲ್ಲ: ಸಚಿವ ಹಾಲಪ್ಪ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 6:09 IST
Last Updated 9 ನವೆಂಬರ್ 2022, 6:09 IST
ಹಾಲಪ್ಪ ಆಚಾರ್‌
ಹಾಲಪ್ಪ ಆಚಾರ್‌   

ಕೊಪ್ಪಳ: ‘ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಏನೂ ಸೌಲಭ್ಯಗಳನ್ನು ಕಲ್ಪಿಸದ, ಒಂದೂ ನೇಮಕಾತಿಯನ್ನು ಮಾಡದವರಿಂದ ನಾನು ಹೇಳಿಸಿಕೊಳ್ಳುವಂಥದ್ದು ಏನೂ ಇಲ್ಲ‘ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ಕುಕನೂರು ತಾಲ್ಲೂಕಿನ ತಳಕಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕೊಪ್ಪಳ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಹೊಸ ನೇಮಕಾತಿ, ಕಟ್ಟಡ ಹಾಗೂ ಜಮೀನು ಖರೀದಿಸುವಂತಿಲ್ಲ ಎನ್ನುವ ಷರತ್ತುಗಳನ್ನು ವಿಧಿಸಿದೆ.

ಸರ್ಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಸಚಿವ ಬಸವರಾಜ ರಾಯರಡ್ಡಿ ‘ಸರ್ಕಾರ ವಿಶ್ವವಿದ್ಯಾಲಯಗಳ ಪಾವಿತ್ರ್ಯತೆಯನ್ನು ಕಳೆದಿದ್ದು, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚೆಲ್ಲಾಟವಾಡುತ್ತಿದೆ’ ಎಂದು ‘ಪ‍್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದರು.

ADVERTISEMENT

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಹಾಲಪ್ಪ ಅವರು ‘ತಳಕಲ್‌ ಎಂಜಿನಿಯರಿಂಗ್‌ ಕಾಲೇಜಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸದೇ, ಒಂದೂ ನೇಮಕಾತಿ ಮಾಡದೆ ಕಟ್ಟಡ ಮಾತ್ರ ಕಟ್ಟಿ ಹೋದವರಿಂದ ಹೇಳಿಸಿಕೊಳ್ಳುವುದು ಅಗತ್ಯವಿಲ್ಲ. ಜಿಲ್ಲೆಗೆ ವಿಶ್ವವಿದ್ಯಾಲಯ ಮಂಜೂರಾತಿ ಆಗಬೇಕೆಂಬುದು ನನ್ನ ಆಸೆಯಾಗಿತ್ತು. ನನ್ನ ತಾಲ್ಲೂಕಿಗೇ ಕೊಡಿ ಎಂದು ಯಾವತ್ತೂ ಕೇಳಿರಲಿಲ್ಲ’ ಎಂದರು.

‘ಸರ್ಕಾರ ಆರಂಭಿಕವಾಗಿ ತಳಕಲ್‌ನಲ್ಲಿ ವಿಶ್ವವಿದ್ಯಾಲಯದ ಆರಂಭಿಸಲಿದೆ. ಬಳಿಕ ಜಿಲ್ಲೆಯಲ್ಲಿ ಎಲ್ಲಿ ಬೇಕಾದರೂ ಸ್ಥಳಾಂತರ ಮಾಡಲಿ. ಹಂತಹಂತವಾಗಿ ವಿ.ವಿ. ಅಭಿವೃದ್ಧಿ ಮಾಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.