ಯಲಬುರ್ಗಾ: ‘ಶಾಲಾ ಹಂತದಲ್ಲಿಯೇ ಮಕ್ಕಳಿಗೆ ವೃತ್ತಿ ಶಿಕ್ಷಣದ ಕುರಿತು ಮಾಹಿತಿ ನೀಡುವುದರಿಂದ ಭವಿಷ್ಯದಲ್ಲಿ ಆರ್ಥಿಕ ಸ್ವಾವಲಂಬಿಗಳಾಗಿ ರೂಪುಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ’ ಎಂದು ಕೊಪ್ಪಳ ಜಿಲ್ಲಾ ವಸತಿ ಶಾಲೆಗಳ ನೌಕರರ ಸಂಘದ ಅಧ್ಯಕ್ಷ ಗುರುಬಸಪ್ಪ ಮುಡಪಲದಿನ್ನಿ ಹೇಳಿದರು.
ತಾಲ್ಲೂಕಿನ ಹೊಸಳ್ಳಿ ಗ್ರಾಮದ ಹತ್ತಿರದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ರೈಸ್ ಬೆಂಗಳೂರು ಹಾಗೂ ಇನ್ನಿತರ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾಮಟ್ಟದ ವಸತಿ ಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿರುವ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಭೌದ್ಧಿಕ ಜ್ಞಾನವೃದ್ಧಿಯ ಜತೆಗೆ ಭವಿಷ್ಯತ್ತಿನಲ್ಲಿ ಕೈಗೊಳ್ಳಬಹುದಾದ ಅಥವಾ ಗುರಿ ಸಾಧನೆಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸರ್ಕಾರೇತರ ಸಂಘ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಯ ಮೂಲಕ ಉತ್ತಮ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಿದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಮನ್ವಯಾಧಿಕಾರಿ ನಾಗರಾಜ ಸಂಗನಾಳ ಮಾತನಾಡಿ, ‘ಮಕ್ಕಳ ಆಸಕ್ತಿ ಮತ್ತು ಅಭಿರುಚಿಯನ್ನು ಗುರುತಿಸಿ, ಆ ನಿಟ್ಟಿನಲ್ಲಿ ಅವರನ್ನು ಪ್ರೋತ್ಸಾಹಿಸಿ ಉತ್ತಮ ಸಾಧನೆಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ದಾರಿ ತೋರುವ ಕೆಲಸ ಆಗಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸುವಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ ಇರುವುದರಿಂದ ಈ ಹಂತದಲ್ಲಿಯೇ ಸ್ಪಷ್ಟ ಗುರಿ ಇಟ್ಟುಕೊಂಡು ಸಾಧನೆಗೆ ಈಗಿನಿಂದಲೇ ಪ್ರಯತ್ನಕ್ಕೆ ಮುಂದಾಗಬೇಕು. ಹೀಗಾಗಿ ಮಕ್ಕಳು ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
ಪ್ರಾಚಾರ್ಯ ವಿರೂಪಾಕ್ಷ ಹನಮಶೆಟ್ಟಿ ಮಾತನಾಡಿದರು. ಅನೀಲ ಸಂಗಮ, ನಿಂಗಪ್ಪ, ನಾಗರಾಜ ಯಾದವ ಪಾಲ್ಗೊಂಡಿದ್ದರು. ಅಶ್ವಿನಿ, ಸಿಂಚನಾ, ವಾಣಿ ಬಿರಾದಾರ, ನಂದಾ ಬೆನಕನಾಳ, ಶಂಕರ ಇಂಗಳದಾಳ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.