ಕುಕನೂರು: ‘ಸಾರ್ವಜನಿಕ ಆಸ್ಪತ್ರೆಗಳಿಗೆ ಕಾಟ್ ಹಾಗೂ ಬೆಡ್ ವಿತರಣೆ ಕಾರ್ಯ ಶ್ಲಾಘನೀಯ’ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.
ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭಾನುವಾರ ಕೊಪ್ಪಳದ ಸರ್ವೋದಯ ಸಂಸ್ಥೆ ಹಾಗೂ ಸಿಜೆಂಟಾ ಇಂಡಿಯಾ ಲಿಮಿಟೇಡ್ ಕಂಪನಿ ವತಿಯಿಂದ 20 ಬೆಡ್ ಹಾಗೂ ಕಾಟ್ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಆಸ್ಪತ್ರೆ ಗುಣಮಟ್ಟದ್ದಾಗಿದ್ದರೆ ಮಾತ್ರ ಜನರ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ. ಆಸ್ಪತ್ರೆಗೆ ರೋಗಿಗಳು ತಪಾಸಣೆಗೆ ಬಂದಾಗ ನಿರ್ಲಕ್ಷ್ಯವಹಿಸದೇ ಅವರಿಗೆ ಪ್ರೀತಿಯಿಂದ ಚಿಕಿತ್ಸೆ ನೀಡಬೇಕು ಎಂದರು.
ಆಸ್ಪತ್ರೆಯಲ್ಲಿ ಹಲವಾರು ವರ್ಷದಿಂದ ವೈದ್ಯರೊಬ್ಬರೂ ಬರದೆ ತಿಂಗಳ ಸಂಬಳ ಪಡೆಯುತ್ತಿದ್ದರು. ಈ ಬಗ್ಗೆ ಹಲವಾರು ಬಾರಿ ಮೇಲಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜವಾಗಿರಲಿಲ್ಲ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಅವರನ್ನು ವರ್ಗಾವಣೆ ಮಾಡಿಸಲಾಯಿತು.
ಅದೇ ರೀತಿ ಅವರಿಗೆ ಬೆಂಗಾವಲಾಗಿದ್ದ ಉಳಿದ ಇನ್ನಿಬ್ಬರು ವೈದ್ಯರನ್ನು ವರ್ಗಾವಣೆ ಮಾಡಿಸಿದ್ದೇನೆ ಎಂದರು.
ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿಸುವ ಗುರಿ ಹೊಂದಿದ್ದೇನೆ. ಆಸ್ಪತ್ರೆಗಳ ಸಂಕೀರ್ಣ ಹಾಗೂ ಅವುಗಳ ಮೌಲ್ಯ ಹೆಚ್ಚಳಕ್ಕೆ ಆಸ್ಪತ್ರೆ ವೈದ್ಯರ, ಸಿಬ್ಬಂದಿ ಕ್ರೀಯಾಶೀಲತೆ ಬಹುಮುಖ್ಯ. ಆಸ್ಪತ್ರೆಗಳ ಶ್ರೇಯೋಭಿವೃದ್ಧಿಗೆ ಸಿಜೆಂಟಾ ಕಂಪನಿ ಅವರ ಕಾರ್ಯ ಶ್ಲಾಘನೀಯ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಮಂಜುನಾಥ ಬ್ಯಾಲಹುಣಸಿ, ಸರ್ವೋದಯ ಸಂಸ್ಥೆಯ ಅಧ್ಯಕ್ಷ ನಾಗರಾಜ ದೇಸಾಯಿ, ಸಿಜೆಂಟಾ ಕಂಪನಿ ಪ್ರತಿನಿಧಿ ರಾಜಶೇಖರ ಕಟಗಿ, ಸಿಪಿಐ ನಾಗರಡ್ಡಿ, ಶಿವಕುಮಾರ ನಾಗಲಾಪೂರಮಠ, ಕಳಕಪ್ಪ ಕಂಬಳಿ, ಶರಣಪ್ಪ ಬಣ್ಣದಬಾವಿ, ದೀಪಾ ಆಚಾರ, ಬಸವನಗೌಡ ತೊಂಡಿಹಾಳ, ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಕರಬಸಯ್ಯ ಬಿನ್ನಾಳ ಹಾಗೂ ಬಸವರಾಜ ಹಾಳಕೇರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.