ADVERTISEMENT

ತುಂಗಭದ್ರಾ ಜಲಾಶಯ | ಡಿಸೆಂಬರ್‌ 2ನೇ ವಾರದಿಂದ ಕ್ರಸ್ಟ್‌ಗೇಟ್‌ ಅಳವಡಿಕೆ: ತಂಗಡಗಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 10:44 IST
Last Updated 14 ನವೆಂಬರ್ 2025, 10:44 IST
   

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಡಿಸೆಂಬರ್‌ ಎರಡನೇ ವಾರದಿಂದ ಹೊಸ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುವ ಕಾರ್ಯ ಆರಂಭವಾಗಲಿದ್ದು, ಜೂನ್‌ ವೇಳೆಗೆ ಎಲ್ಲ ಗೇಟ್‌ಗಳ ಬದಲಾವಣೆ  ಪೂರ್ಣಗೊಳ್ಳಲಿದೆ ಎಂದು ಐಸಿಸಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಜೆಪಿ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಬಿಜೆಪಿಗೆ ಮಾನ ಮರ್ಯಾದೆ ಇದೆಯೇ? ಮೊದಲು ಗೇಟ್‌ ಅಳವಡಿಕೆ ಮಾಡುತ್ತೇವೆ ಎಂದು ಸದನದಲ್ಲಿ ಜಲಸಂಪನ್ಮೂಲ ಸಚಿವರು ಹೇಳಿದಾಗ ಬಿಜೆಪಿ ಶಾಸಕರು ಡಿ.ಕೆ. ಶಿವಕುಮಾರ್‌ ಅವರನ್ನು ಅಭಿನಂದಿಸಿದ್ದಾರೆ. ಬಿಜೆಪಿ ಈಗ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಅವರಿಗೆ ಯಾವುದೇ ಬದ್ಧತೆಯಿಲ್ಲ’ ಎಂದರು.

ಕ್ರಸ್ಟ್‌ಗೇಟ್ ಅಳವಡಿಸುವ ವಿಚಾರದಲ್ಲಿ ₹52 ಕೋಟಿ ಅವ್ಯವಹಾರವಾದ ಬಗ್ಗೆ ಬಿ. ಶ್ರೀರಾಮುಲು ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿ ‘ಕ್ರಸ್ಟ್‌ಗೇಟ್‌ಗಳಿಗೆ ಟೆಂಡರ್ ಮಾಡಿದ್ದು ಕೇಂದ್ರದ ಅಧೀನದಲ್ಲಿರುವ ತುಂಗಭದ್ರಾ ಮಂಡಳಿ. ರಾಜ್ಯ ಸರ್ಕಾರಕ್ಕೆ ಟೆಂಡರ್‌ ಕರೆಯುವ ಅಧಿಕಾರವಿಲ್ಲ. ಗೇಟ್‌ ತಯಾರಿಯ ಗುತ್ತಿಗೆಯನ್ನು ಗುಜರಾತ್‌ನ ಅಹಮದಾಬಾದ್‌ ಕಂಪನಿಗೆ ನೀಡಲಾಗಿದೆ. ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರವನ್ನು ಕೇಳಲಿ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.