ಅಂಜನಾದ್ರಿ: ಸದಾಶಿವ ಆಯೋಗದ ವರದಿ ಯಥಾವತ್ ಅನುಷ್ಠಾನ ಮಾಡಬೇಕು ಎಂದು ಪ್ರತಿಭಟಿಸಿ ಕಪ್ಪು ಬಾವುಟ ಪ್ರದರ್ಶಿಸಿದ ನಾಲ್ಕುಜನರ ಪೈಕಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು. ಆನೆಗೊಂದಿ ಉತ್ಸವ ಮೈದಾನದ ಹೊರಭಾಗದಲ್ಲಿ ಬಳಿ ಕಪ್ಪು ಬಾವುಟ ತೋರಿಸಿದ್ದರು.
ವಾಗ್ವಾದ: ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಬಂದಿದ್ದ ಎಎಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಸಿ.ಎಂಗೆ ಮನವಿ ಸಲ್ಲಿಸಲು ಬಂದಿದ್ದೇವೆ. ಒಳಗಡೆ ಹೋಗಲು ಅವಕಾಶ ಮಾಡಿಕೊಡಿ ಎಂದು ಎಎಪಿ ಕಾರ್ಯಕರ್ತರು ಮಾಡಿದ ಮನವಿಗೆ ಐದು ಜನರನ್ನು ಮಾತ್ರ ಬಿಡಲು ಸಾಧ್ಯ ಎಂದು ಪೊಲೀಸರು ಹೇಳಿದರು. ಇದರಿಂದ ಸಿಟ್ಟಾದ ಕಾರ್ಯಕರ್ತರು ವಾಗ್ವಾದಕ್ಕೆ ಇಳಿದರು.
ಎಎಪಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹುಸೇನಸಾಬ ಗಂಗನಾಳ ಮಾತನಾಡಿ ‘ಮುಖ್ಯಮಂತ್ರಿ ಬಿಜೆಪಿಗರಿಗೆ ಮಾತ್ರ ಸೀಮಿತವಲ್ಲ. ಬಿಜೆಪಿ ಕಾರ್ಯಕರ್ತರನ್ನು ಮಾತ್ರ ಹೆಲಿಪ್ಯಾಡ್ ಮೈದಾನದ ಒಳಗೆ ಬಿಟ್ಟು ನಮ್ಮನ್ನು ಯಾಕೆ ಬಿಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಎಲ್ಲರನ್ನೂ ಒಳಗಡೆ ಬಿಡಲಾಯಿತು.
ಬಿಜೆಪಿ ಕಾರ್ಯಕರ್ತರು ಕೂಡ ಮೈದಾನದ ಒಳಗೆ ಹೋಗಲು ಪ್ರಯತ್ನಿಸಿದಾಗ ಪೊಲೀಸರು ಅದನ್ನು ಅವಕಾಶ ನೀಡಲಿಲ್ಲ. ಇದರಿಂದ ಇಬ್ಬರ ನಡುವೆ ಕೆಲಹೊತ್ತು ವಾಗ್ವಾದ ನಡೆಯಿತು. ಸ್ಥಳಕ್ಕೆ ಬಂದ ಶಾಸಕ ಪರಣ್ಣ ಮುನವಳ್ಳಿ ‘ಇದು ಪಕ್ಷದ ಕಾರ್ಯಕ್ರಮವಲ್ಲ. ಸರ್ಕಾರಿ ಕಾರ್ಯಕ್ರಮವಾಗಿದ್ದು, ಎಲ್ಲಾ ಕಾರ್ಯಕರ್ತರು ಸಹಕರಿಸಬೇಕು’ ಎಂದು ಕೋರಿದರು. ಬಳಿಕ ಕಾರ್ಯಕರ್ತರು ಸುಮ್ಮನಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.