ಕುಷ್ಟಗಿ: ಗ್ರಾಹಕರಿಗೆ ಅಗತ್ಯ ಸೇವೆಗಳನ್ನು ಕಾಲ ಮಿತಿಯ ಒಳಗೆ ಒದಗಿಸುವ ನಿಟ್ಟಿನಲ್ಲಿ ಜೆಸ್ಕಾಂ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದು ಸಾರ್ವಜನಿಕರು ಸಕಾಲ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಜೆಸ್ಕಾಂ ವತಿಯಿಂದ ಡಿ 19ರವರೆಗೆ ಹಮ್ಮಿಕೊಂಡಿರುವ ಸಕಾಲ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯುತ್ ತಂತಿ ತುಂಡಾದರೆ, ವಿತರಣಾ ಪರಿವರ್ತಕಗಳು ವಿಫಲಗೊಂಡಿರುವುದು, ಮೀಟರ್ಗೆ ಸಂಬಂಧಿಸಿದ ದೂರುಗಳು, ಹೊಸ ಸಂಪರ್ಕ ಕಲ್ಪಿಸಿಕೊಳ್ಳುವುದು, ಹೆಚ್ಚುವರಿ ಲೋಡ್ಗೆ ಅರ್ಜಿ ಸಲ್ಲಿಕೆ. ಮಾಲಿಕತ್ವದ ವರ್ಗಾವಣೆ, ಜಕಾತಿ ಬದಲಾವಣೆ, ಬಿಲ್ಗಳಿಗೆ ಸಂಬಂಧಿಸಿದ ದೂರುಗಳ ಇತ್ಯರ್ಥ, ವಿದ್ಯುತ್ ಸಂಪರ್ಕ ಕಡಿತ, ಠೇವಣಿ ಮರುಪಾವತಿ ಸೇರಿದಂತೆ ವಿವಿಧ ರೀತಿಯ ಕೆಲಸ ಕಾರ್ಯಗಳು, ದೂರುಗಳನ್ನು ನಿಗದಿತ ಅವಧಿಯಲ್ಲಿ ಪರಿಹರಿಸಿಕೊಳ್ಳಲು ಸಕಾಲ ಜನರಿಗೆ ಒಂದು ಅತ್ಯುತ್ತಮ ಯೋಜನೆಯಾಗಿದೆ ಎಂದರು. ಅಲ್ಲದೆ ಸಕಾಲದ ಅರ್ಜಿಗಳನ್ನು ಇತ್ಯರ್ಥ ಮಾಡದ ಅಧಿಕಾರಿ ಅಥವಾ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಜರುಗಿಸುವುದಕ್ಕೂ ಅವಕಾಶವಿದೆ ಎಂದು ವಿವರಿಸಿದರು.
ಸಹಾಯಕ ಕಾರ್ಯಪಾಲಕ ಎಂಜಿನಿಯರ್ (220 ಕೇಂದ್ರ) ಜೋನ್ಸ್ ಇತರರು ಸಪ್ತಾಹ ಕುರಿತು ಮಾತನಾಡಿದರು. ನಂತರ ಈ ವಿಷಯ ಕುರಿತು ಜನರಲ್ಲಿ ಅರಿವು ಮೂಡಿಸುವ ಜಾಥಾಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ತಾಂತ್ರಿಕ ಶಾಖೆಯ ಬಸವರಾಜ ಮುದಗಲ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ (220 ಕೇಂದ್ರ), ಶಾಖಾಧಿಕಾರಿಗಳಾದ ರಶ್ಮಿ, ತಾಜುದ್ದೀನ್, ಹಿರಿಯ ಸಹಾಯಕ ಬಾಳಪ್ಪ, ಸಹಾಯಕ ಎಂಜಿನಿಯರಗಳಾದ ಕಲ್ಲಪ್ಪ, ಸಲೀಂ ಪಾಷಾ, ಕವಿಪ್ರನಿ ನೌಕರರ ಸಂಘದ ಕಾರ್ಯದರ್ಶಿ ಸಯ್ಯದ್ ಅಲ್ತಾಫ್ ಹುಸೇನ್, ಗುತ್ತಿಗೆದಾರರಾದ ಯಮನೂರಪ್ಪ ಹಾಗೂ ಸರಫ್ರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.