ಕನಕಗಿರಿ: ‘ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಗೊಂಡ ತಾಲ್ಲೂಕಿನ ಇಂಗಳದಾಳ, ಬೊಮ್ಮಸಾಗರ ತಾಂಡಾ, ಅಡವಿಬಾವಿ ಹಾಗೂ ಚಿರ್ಚನಗುಡ್ಡ ತಾಂಡಾದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿವೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಾವ್ಯಾರಾಣಿ ತಿಳಿಸಿದರು.
ಸಮೀಪದ ಚಿರ್ಚನಗುಡ್ಡ ತಾಂಡಾದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿ,‘ಆದರ್ಶ ಗ್ರಾಮ ಯೋಜನೆಗೆ ಆಯ್ಕೆಗೊಂಡ ಪ್ರತಿಯೊಂದು ಗ್ರಾಮಗಳಿಗೆ ತಲಾ ₹40 ಲಕ್ಷ ಅನುದಾನ ಬಿಡುಗಡೆಯಾಗಿದೆ. ಕುಡಿಯುವ ನೀರು, ಕಸ ವಿಲೇವಾರಿ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಶೌಚಾಲಯ ದುರಸ್ತಿ, ಸಿ.ಸಿ ರಸ್ತೆ ನಿರ್ಮಾಣ, ಸೌರ ವಿದ್ಯುತ್ ಮತ್ತು ಬೀದಿ ದೀಪಗಳ ಅಳವಡಿಕೆ ಸೇರಿ ಇತರೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ’ ಎಂದು ಹೇಳಿದರು.
ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯೇ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಉದ್ದೇಶ. ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟದ ಕಡೆಗೆ ಗಮನ ಹರಿಸಬೇಕು. ಕಳಪೆ ಗುಣಮಟ್ಟದ ಕೆಲಸ ನಡೆಯುತ್ತಿದ್ದರೆ ದೂರು ನೀಡಬೇಕು ಎಂದು ತಿಳಿಸಿದರು.
ಬೊಮ್ಮಸಾಗರ ತಾಂಡಾದ ಅಂಗನವಾಡಿ ಕೇಂದ್ರ, ಇಂಗಳದಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ದಾಖಲಾತಿ ಪರಿಶೀಲಿಸಿದರು.ಶಿಕ್ಷಕರು ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದರು.
ಕೆಆರ್ ಡಿಇಎಲ್ ಜೆಇ ದೇವರಾಜ, ಗ್ರಾಪಂ ಪಿಡಿಒಗಳಾದ ವೀರಣ್ಣ ನೆಕ್ರಳ್ಳಿ, ಶರಣೇಗೌಡ ಪಾಟೀಲ, ಗ್ರಾ.ಪಂ. ಸದಸ್ಯರಾದ ಹುಸೇನಸಾಬ, ರಾಮಚಂದ್ರಗೌಡ ಕೃಷ್ಣಪ್ಪ ಹಾಗೂ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.