ADVERTISEMENT

ತೋಟಗಾರಿಕೆ ಬೆಳೆ ಮಾರಾಟಕ್ಕೆ ವ್ಯವಸ್ಥೆ

ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಹಾಯಹಸ್ತ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 13:20 IST
Last Updated 27 ಮಾರ್ಚ್ 2020, 13:20 IST
ಕೊಪ್ಪಳದ ಭಾಗ್ಯನಗರದ ಗಣೇಶ ತೆಗ್ಗಿನಲ್ಲಿ ಶುಕ್ರವಾರ ತೋಟಗಾರಿಕೆ ಇಲಾಖೆ ವಾಹನ ತರಕಾರಿ, ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸಲು ಸಂಚರಿಸುವುದು ಕಂಡು ಬಂತು
ಕೊಪ್ಪಳದ ಭಾಗ್ಯನಗರದ ಗಣೇಶ ತೆಗ್ಗಿನಲ್ಲಿ ಶುಕ್ರವಾರ ತೋಟಗಾರಿಕೆ ಇಲಾಖೆ ವಾಹನ ತರಕಾರಿ, ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸಲು ಸಂಚರಿಸುವುದು ಕಂಡು ಬಂತು   

ಕೊಪ್ಪಳ: ಕೋವಿಡ್-19 ವೈರಸ್‍ನಿಂದಾಗಿ ಜಿಲ್ಲೆಯಲ್ಲಿ 21 ದಿನಗಳ ಕಾಲ ಬಂದ್ ವಾತಾವರಣವಿರುವುದರಿಂದ ಜಿಲ್ಲಾಧಿಕಾರಿಯವರ ಆದೇಶದಂತೆ ಸಾರ್ವಜನಿಕರು ಮನೆಯಿಂದ ಹೊರಗೆ ಬರದ ಕಾರಣ, ಅವರಿಗೆ ಅಗತ್ಯವಿರುವ ತರಕಾರಿ, ಹಣ್ಣುಗಳನ್ನು ಒದಗಿಸಲು ಇಲಾಖೆವ್ಯವಸ್ಥೆ ಮಾಡಲಾಗಿದೆ.

ರೈತರು ತಮ್ಮ ತೋಟಗಾರಿಕೆ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಸೂಕ್ತ ಬೆಲೆಗೆ ಮಾರಾಟ ಮಾಡುವ ಅವಕಾಶದ ಸದ್ಭಳಕೆಯನ್ನು ಮಾಡಿಕೊಳ್ಳಬಹುದಾಗಿದೆ.

ದ್ರಾಕ್ಷಿ: ದ್ರಾಕ್ಷಿ ಬೆಳೆಗಾರರು ಈಗ ಕಟಾವಿಗೆ ಬಂದಿರುವ ತಮ್ಮ ಉತ್ಪನ್ನವನ್ನು ಒಣ ದ್ರಾಕ್ಷಿಯಾಗಿ ಮಾಡುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಇಲಾಖೆಯಿಂದ ಸಹಾಯಧನ ನೀಡಲಾಗುತ್ತಿದೆ. ಈ ತಂತ್ರಜ್ಞಾನದ ಬಳಕೆ ಮಾಡಿಕೊಂಡು ದ್ರಾಕ್ಷಿ ಬೆಳೆಗಾರರು ತಮ್ಮ ತೋಟದಲ್ಲಿ ಒಣ ದ್ರಾಕ್ಷಿ ಘಟಕವನ್ನು ತಾವೇ ನಿರ್ಮಿಸಿಕೊಂಡು ದ್ರಾಕ್ಷಿ ಹಣ್ಣನ್ನು ಮಣೂಕ ಮಾಡಿ ಶೈತ್ಯಾಗಾರದಲ್ಲಿ ಶೇಖರಿಸಿಟ್ಟು ಉತ್ತಮ ಬೇಡಿಕೆ ಬಂದಾಗ ಲಾಭದಾಯಕ ಬೆಲೆಗೆ ಮಾರಾಟ ಮಾಡಬಹುದಾಗಿದೆ.

ADVERTISEMENT

ರೈತರು ಈ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳಬೇಕು. ಈಗ ಒಣ ದ್ರಾಕ್ಷಿ ಘಟಕವನ್ನು ನಿರ್ಮಿಸಿಕೊಂಡವರಿಗೆ ಮುಂದಿನ ಆರ್ಥಿಕ ವರ್ಷದಲ್ಲಿ ಇಲಾಖೆ ನಿಯಮಾವಳಿ ಅನುಸಾರ ಸಹಾಯಧನ ನೀಡಲಾಗುವುದು. ಆದ್ದರಿಂದ ಪ್ರತಿಯೊಬ್ಬರೂ ಒಣ ದ್ರಾಕ್ಷಿ ಘಟಕವನ್ನು ನಿರ್ಮಿಸಿಕೊಳ್ಳಬೇಕು.

ಇದಲ್ಲದೇ ರೈತರು ತಮ್ಮ ಉತ್ಪನ್ನವನ್ನು ಸರಿಯಾದ ಸಮಯದಲ್ಲಿ ಕಟಾವು ಮಾಡಿ ಪ್ಲಾಸ್ಟಿಕ್ ಕ್ರೇಟ್‍ಗಳಲ್ಲಿ ಸಂಗ್ರಹಿಸಿ ಇಲಾಖೆಗೆ ತಂದು ಮಾರಾಟ ಮಾಡುವ ಅವಕಾಶವಿರುತ್ತದೆ. ರೈತರು ಈ ಅವಕಾಶವನ್ನು ಬಳಸಿಕೊಂಡು ಯಾವುದೇ ಆತಂಕಕ್ಕೆ ಒಳಗಾಗದೇ ತಮ್ಮ ಉತ್ಪನ್ನಗಳನ್ನು ಯೋಗ್ಯ ಬೆಲೆಗೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ.

ಮಾವು: ಮುಂದಿನ ದಿನಗಳಲ್ಲಿ ಮಾವು ಕೂಡ ಕಟಾವಿಗೆ ಬರಲಿದ್ದು, ಮಾವು ಬೆಳೆಗಾರರು ಆತಂಕ ಪಡದೇ ತಮ್ಮ ಹಣ್ಣನ್ನು ಕಟಾವು ಮಾಡಿರಾಸಾಯನಿಕ ಬಳಸದೇ ನೈಸರ್ಗಿಕ ರೀತಿಯಲ್ಲಿ ಮಾಗಿಸಿ ತಮ್ಮ ಹಣ್ಣುಗಳನ್ನು ಇಲಾಖೆಗೆ ತಂದು ಮಾರಾಟ ಮಾಡುವ ಅವಕಾಶವಿರುತ್ತದೆ. ಆದ್ದರಿಂದ ರೈತರು ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಮಾವಿನ ಹಣ್ಣನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು ದೂ-08539-231530, ಆಯಾ ತಾಲ್ಲೂಕು ಕಚೇರಿಗಳನ್ನು ಮತ್ತು ಕೇಂದ್ರ ಸ್ಥಾನಿಕ ಸಹಾಯಕ ಮೊ- 9611888607 ಮತ್ತು ವಿಷಯ ತಜ್ಞರು ಮೊ- 9482672039 ಅವರನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.