ಕಮಲಾಪುರ: ಈ ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನುಒಡೆಯುವ ಕೆಲಸ ಮಾಡಿದ್ದ ಕಾಂಗ್ರೆಸ್ ಈಗ ಅದೇ ಸಮಾಜದ ಕುರಿತು ಮೊಸಳೆ ಕಣ್ಣೀರು ಹಾಕುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಮಹಾಗಾಂವ ಕ್ರಾಸ್ನಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮಡು ಪರ ಪ್ರಚಾರ ನಡೆಸಿದ ಅವರು, ಬಿಜೆಪಿ ವೀರಶೈವ ಲಿಂಗಾಯತ ಸಮಾಜವನ್ನು ಕಡೆಗಣಿಸುತ್ತಿದೆ ಎಂದು ಕಾಂಗ್ರೆಸ್ನವರು ನಿರಾಧಾರ ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತ್ತು. ಜೊತೆಗೆ ಕಳೆದ ಚುನಾವಣೆ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜ ಒಡೆಯುವ ಕೆಲಸ ಮಾಡಿತ್ತು ಎಂದರು.
ಯಡಿಯೂರಪ್ಪ ಹೆಸರು ಹೇಳಿ ಗೆದ್ದು ಮಂತ್ರಿಯಾಗಿದ್ದ ವ್ಯಕ್ತಿ ಈಗ ಯಡಿಯೂರಪ್ಪಅವರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಯಡಿಯೂರಪ್ಪನವರ ಕುರಿತು ತುಚ್ಛವಾಗಿ ಮಾತನಾಡುವ ಕಾಂಗ್ರೆಸ್ ಅಭ್ಯರ್ಥಿಯನ್ನು ಮನೆಗೆ ಕಳುಹಿಸಿ. ಕೆಲವರು ನಮ್ಮ ಪಕ್ಷದಲ್ಲಿ ಉಂಡು, ತಿಂದು, ತೇಗಿ ಮನಬಂದಂತೆ ಮಾತನಾಡುತ್ತಿದ್ದಾರೆ. ಸುಪಾರಿ ಪಡೆದುಕೊಂಡು ಕಾಂಗ್ರೆಸ್ ಪರ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ’ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಡಬಲ್ ಎಂಜಿನ್ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಯಾಗಲಿದೆ‘ ಎಂದರು.
ಜಿ.ಪಂ.ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ, ಮಾಜಿ ಸದಸ್ಯ ಬಸವರಾಜ ಮಾಲಿಪಾಟೀಲ, ರಾಜಕುಮಾರ ಕೋಟೆ, ಶಿವಕುಮಾರ ಪಸಾರ, ಉದಯ ರಟಕಲ್, ರಾಜು ದೋಶೆಟ್ಟಿ, ಹರ್ಷವರ್ಧನ ಗುಗಳೆ, ಬಾಬು ವಾಲಿ, ಶರಣಬಸಪ್ಪ ಅಷ್ಟಗಿ, ಸತೀಶ ಸೊರಡೆ, ಜಗನ್ನಾಥ ಮಾಲಿ ಪಾಟೀಲ, ಪ್ರವೀಣ ಮುಚ್ಚಟ್ಟಿ, ಶರಣು ಕೋರಿ, ಸಿದ್ದಣಗೌಡ ಧಮ್ಮೂರ, ಸುರೇಶ ರಾಠೋಡ್, ಚಂದು ಬಬಲಾದ, ನಾಮದೇವ ಕರಹರಿ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.