ಕುಷ್ಟಗಿ: ಬೆಂಗಳೂರಿನ ಅಭಿಮಾನ್ ಸ್ಟುಡಿಯೊದಲ್ಲಿಯೇ ಚಲನಚಿತ್ರ ನಟ ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ಪುನರ್ ನಿರ್ಮಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿನ ಡಾ.ವಿಷ್ಣು ಸೇನಾ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
ಈ ಕುರಿತು ರಾಜ್ಯಪಾಲರಿಗೆ ಬರೆದ ಮನವಿಯನ್ನು ಗುರುವಾರ ತಹಶೀಲ್ದಾರ್ ಅಶೋಕ ಶಿಗ್ಗಾವಿ ಅವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಪ್ರಮುಖ ವೀರೇಶ ಬಂಗಾರಶೆಟ್ಟರ ಇತರರು, ವಿಷ್ಣುವರ್ಧನ ಅವರ ಸಮಾಧಿ ತೆರವುಗೊಳಿಸಿದ್ದನ್ನು ಖಂಡಿಸಿದರು. ‘ಈ ಘಟನೆ ವಿಷ್ಣುವರ್ಧನ ಅವರ ಅಭಿಮಾನಿಗಳಿಗೆ ಬಹಳಷ್ಟು ನೋವು ಉಂಟು ಮಾಡಿದೆ. ಚಲನಚಿತ್ರ ಚಿತ್ರೀಕರಣಕ್ಕೆಂದು ಲೀಸ್ ಆಧಾರದ ಮೇಲೆ ರಾಜ್ಯ ಸರ್ಕಾರ ನೀಡಿದ 20 ಎಕರೆ ಜಮೀನನ್ನು ಕೆಲವರು ದುರ್ಬಳಕೆ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ’ ಎಂದರು.
‘ಗಂಭೀರ ಪ್ರಕರಣ ಇದಾಗಿದೆ. ಸಮಾಧಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಮೌನ ವಹಿಸಿರುವುದು ಅಚ್ಚರಿ ತಂದಿದೆ. ಸರ್ಕಾರ ತಕ್ಷಣ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಸೂಕ್ತ ದಾಖಲೆಗಳ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ಭೂಮಿಯನ್ನು ಮತ್ತೆ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು’ ಎಂದಿದ್ದಾರೆ
ಈ ಸಂದರ್ಭದಲ್ಲಿ ಬಸವರಾಜ ಪಾಟೀಲ, ಚಿನ್ನಪ್ಪ ನಾಗರಾಳ, ಶಿವರುದ್ರಯ್ಯ ನವಲಿಹಿರೇಮಠ, ಬಸವರಾಜ ಗಾಣಿಗೇರ, ಶಿವರಾಜ ಮಸ್ಕಿ, ರಿಯಾಜ್ ಪಟೇಲ, ಬಸವರಾಜ ಹಡಪದ, ರಾಮಣ್ಣ ಕೋರಿ, ಪ್ರಭಂಜನ ಅಗ್ನಿಹೋತ್ರಿ, ಎಸ್.ಎಸ್.ಹಿರೇಮಠ, ಶಾಂತರಾಜ ಗೋಗಿ ಸೇರಿ ವಿಷ್ಣು ಸೇನಾ ಸಮಿತಿ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.