ADVERTISEMENT

ಬೆರೋನಿ ಮಸೀದಿ ಉದ್ಘಾಟನೆ ವಕ್ಫ್‌ನಿಂದ ನೋಟಿಸ್ ಜಾರಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 6:08 IST
Last Updated 13 ಸೆಪ್ಟೆಂಬರ್ 2021, 6:08 IST
ಗಂಗಾವತಿ ಬೇರೊನಿ ಅಬಾದಿ ಮಸೀದಿ ವಾಣಿಜ್ಯ ಮಳಿಗೆ
ಗಂಗಾವತಿ ಬೇರೊನಿ ಅಬಾದಿ ಮಸೀದಿ ವಾಣಿಜ್ಯ ಮಳಿಗೆ   

ಗಂಗಾವತಿ: ನಗರದ ಬೆರೋನಿ ಅಬಾದಿ ಮಸೀದಿ ವಾಣಿಜ್ಯ ಮಳಿಗೆ ಉದ್ಘಾಟನೆಯಲ್ಲಿ ಶಿಷ್ಟಚಾರ ಉಲ್ಲಂಘನೆ ಆರೋಪದಡಿ ಮಸೀದಿ ಆಡಳಿತ ಮಂಡಳಿಗೆ ಜಿಲ್ಲಾ ವಕ್ಫ್ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಲತೀಫಿಯಾ ವೃತ್ತದ ಬಳಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಇತ್ತೀಚೆಗೆ ಅವುಗಳನ್ನು ಉದ್ಘಾಟನೆ ಮಾಡಲಾಗಿತ್ತು. ಆದರೆ ಶಿಷ್ಟಚಾರದ ಪ್ರಕಾರ ಮಳಿಗೆಯನ್ನು ಸ್ಥಳೀಯ ಶಾಸಕರ ಉದ್ಘಾಟನೆ ಮಾಡಬೇಕಾಗಿದೆ. ಆದರೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ಬೆರೋನಿ ಮಸೀದಿ ಆಡಳಿತ ಮಂಡಳಿಯವರು ಶಾಸಕರ ಗಮನಕ್ಕೆ ತರದೆ, ಮಾಜಿ ಸಂಸದ ಶಿವರಾಮಗೌಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀನಾಥ ಅವರನ್ನು ಆಹ್ವಾನಿಸಿ, ಉದ್ಘಾಟನೆ ಮಾಡಿದ್ದಾರೆ.

ಈ ಕುರಿತು ಶಾಸಕ ಪರಣ್ಣ ಮುನವಳ್ಳಿ ಅವರು ಬೆರೋನಿ ಮಸೀದಿ ಸರ್ಕಾರಿ ಆಸ್ತಿ ಆಗಿರುವುದರಿಂದ, ಸರ್ಕಾರದ ಶಿಷ್ಟಚಾರದ ಮೂಲಕ ಸಮಾರಂಭ ಆಯೋಜನೆ ಮಾಡಿ ಉದ್ಘಾಟನೆ ಮಾಡಬೇಕಾಗಿರುತ್ತದೆ. ಆದರೆ ಮಸೀದಿ ಆಡಳಿತ ಮಂಡಳಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಜಿಲ್ಲಾ ವಕ್ಫ್ ಮಂಡಳಿಗೆ ಮೌಖಿಕವಾಗಿ ದೂರು ನೀಡಿದ್ದರು.

ADVERTISEMENT

ಈ ದೂರಿನನ್ವಯ ಜಿಲ್ಲಾ ವಕ್ಫ್ ಅಧಿಕಾರಿ ಮಕ್ಬೂಲ್ ಪಾಶ ಉದ್ಘಾಟನೆ ಕುರಿತು ಸೂಕ್ತ ಮಾಹಿತಿ ಪಡೆದು ನೋಟಿಸ್ ಜಾರಿ ಮಾಡಿದ್ದಾರೆ.

ನಂತರ ಮಾತನಾಡಿದ ಜಿಲ್ಲಾ ವಕ್ಫ್ ಅಧಿಕಾರಿ, ವಾಣಿಜ್ಯ ಮಳಿಗೆ ಉದ್ಘಾಟನೆ ಕುರಿತು ಬೆರೋನಿ ಮಸೀದಿ ಆಡಳಿತ ಮಂಡಳಿ ಇಲಾಖೆಗೆ ಯಾವುದೇ ರೀತಿಯ ಸಂದೇಶ ನೀಡಿಲ್ಲ. ಆದ್ದರಿಂದ ಶಿಷ್ಟಚಾರ ಉಲ್ಲಂಘನೆ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ
ಎಂದು ತಿಳಿಸಿದರು.

*ಸರ್ಕಾರದಿಂದ ಅನುದಾನ ಪಡೆಯದೆ, ದೇಣಿಗೆ ಹಣದ ಮೂಲಕ ಮಳಿಗೆ ನಿರ್ಮಿಸಲಾಗಿದೆ. ಮಳಿಗೆಯನ್ನು ಕೋವಿಡ್ ಸಂಬಂಧ ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಗಿದೆ. ಯಾವುದೇ ಶಿಷ್ಟಾಚಾರ ಉಲ್ಲಂಘನೆ ಮಾಡಿಲ್ಲ.

ಶಾಮೀದ್ ಮನಿಯಾರ್, ಅಧ್ಯಕ್ಷ, ಬೆರೋನಿ ಮಸೀದಿ ಆಡಳಿತ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.