ADVERTISEMENT

ಗೋದಾಮು ವ್ಯವಸ್ಥಾಪ‍ಕ ಅಮಾನತು

ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆಗೆ ಯತ್ನ: ಮೂವರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 18:52 IST
Last Updated 26 ಆಗಸ್ಟ್ 2025, 18:52 IST
ಗಂಗಾವತಿ ಕನಕಗಿರಿ ರಸ್ತೆಯಲ್ಲಿನ ಸರ್ಕಾರಿ ಗೋದಾಮಿನಲ್ಲಿ ಪಡಿತರ ಹಕ್ಕಿಯನ್ನು ಖಾಸಗಿ ಸಂಸ್ಥೆಯ ಚೀಲದಲ್ಲಿ ತುಂಬಿ, ಲಾರಿ ಮೂಲಕ ಸಾಗಾಟ ಮಾಡಲು ಸಿದ್ಧತೆ ನಡೆಸಿರುವುದು
ಗಂಗಾವತಿ ಕನಕಗಿರಿ ರಸ್ತೆಯಲ್ಲಿನ ಸರ್ಕಾರಿ ಗೋದಾಮಿನಲ್ಲಿ ಪಡಿತರ ಹಕ್ಕಿಯನ್ನು ಖಾಸಗಿ ಸಂಸ್ಥೆಯ ಚೀಲದಲ್ಲಿ ತುಂಬಿ, ಲಾರಿ ಮೂಲಕ ಸಾಗಾಟ ಮಾಡಲು ಸಿದ್ಧತೆ ನಡೆಸಿರುವುದು   

ಗಂಗಾವತಿ: ನಗರದ ಕನಕಗಿರಿ ರಸ್ತೆಯಲ್ಲಿರುವ ಸರ್ಕಾರಿ ಗೋದಾಮಿನಲ್ಲಿಟ್ಟಿದ್ದ ಪಡಿತರ ಅಕ್ಕಿಯನ್ನು ಖಾಸಗಿ ಸಂಸ್ಥೆಯ ಚೀಲಗಳಿಗೆ ಹೆಚ್ಚುವರಿಯಾಗಿ ತುಂಬಿ ಸಾಗಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಕಿರಿಯ ಸಹಾಯಕ ಹಾಗೂ ಗೋದಾಮು ವ್ಯವಸ್ಥಾಪಕ ಸೋಮಶೇಖರ ಅವರನ್ನು ಸೇವೆಯಿಂದ ಅಮಾನತು ಮಾಡಿ ಮಂಗಳವಾರ ಸರ್ಕಾರ ಆದೇಶ ಹೊರಡಿಸಿದೆ.

ನಗರದ ರಾಯಚೂರು ರಸ್ತೆಯ ವಿದ್ಯಾನಗರದ ಗೌರಿಶಂಕರ ರೈಸ್‌ಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 168 ಕ್ವಿಂಟಲ್ ಅಕ್ಕಿಯನ್ನು 2022ರಲ್ಲಿ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದು ಸರ್ಕಾರಿ ಗೋದಾಮಿನಲ್ಲಿಟ್ಟಿದ್ದರು. ಸಂಬಂಧಿಸಿದ ಆರೋಪಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದರು.

ಆರೋಪಿಗಳು ಕೋರ್ಟ್‌ ಮೊರೆ ಹೋಗಿ, ‘ಅಧಿಕಾರಿಗಳು ಸೂಕ್ತ ದಾಖಲೆ ಸಂಗ್ರಹಿಸದೆ, ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ’ ಎಂದು ವಾದ ಮಂಡಿಸಿದ್ದರಿಂದ ಇದೇ ವರ್ಷ ಜಿಲ್ಲಾಧಿಕಾರಿ ಆರೋಪಿಗಳಿಗೆ ಅಕ್ಕಿ ವಾಪಸ್ ನೀಡುವಂತೆ ಆದೇಶ ಹೊರಡಿಸಿದ್ದರು. ಜಪ್ತಿ ಮಾಡಿದ್ದ 168 ಕ್ವಿಂಟಲ್ ಅಕ್ಕಿಯನ್ನು ರೈಸ್‌ಮಿಲ್‌ನವರು ವಾಪಸ್‌ ಪಡೆದುಕೊಳ್ಳುವಾಗ ಗೋದಾಮು ವ್ಯವಸ್ಥಾಪಕ ಹಾಗೂ ಇತರರು 275ಕ್ಕೂ ಹೆಚ್ಚು ಕ್ವಿಂಟಲ್‌ನಷ್ಟು ಅಕ್ಕಿ ಸಾಗಾಣಿಕೆಗೆ ಸಹಕರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.  ಮಾಹಿತಿ ತಿಳಿದ ಸಂಘಟನೆಗಳ ಮುಖಂಡರು ಹಾಗೂ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ಬಾಬು ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಇವೆಲ್ಲವೂ ₹9.10 ಲಕ್ಷ ಮೌಲ್ಯದ ಪಡಿತರ ಅಕ್ಕಿ ಎನ್ನುವ ಮಾಹಿತಿ ಗೊತ್ತಾಗಿದೆ.

ADVERTISEMENT

ಈ ಕುರಿತು ಇಲ್ಲಿನ ತಹಶೀಲ್ದಾರ್‌ ಕಚೇರಿಯ ಆಹಾರ ಶಿರಸ್ತೇದಾರ್‌ ಸುಹಾಸ್ ಯರೇಶೀಮಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಗೋದಾಮು ವ್ಯವಸ್ಥಾಪಕ ಸೋಮಶೇಖರ ಬುಡ್ಡನವರ, ವಿದ್ಯಾನಗರದ ಉಮಾಶಂಕರ ರೈಸ್‌ಮಿಲ್‌ ಮಾಲೀಕ, ಲಾರಿ ಮಾಲೀಕ ಮತ್ತು ಚಾಲಕರ ವಿರುದ್ಧ ಕ್ರಮ ಎಫ್‌ಐಆರ್‌ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.