ಕೊಪ್ಪಳ: ಕೊರೊನಾ ಸೋಂಕು ನಿಯಂತ್ರಣ ಉದ್ದೇಶದಿಂದ ಜಾರಿಗೊಳಿಸಿರುವ ಎರಡನೇವಾರಾಂತ್ಯಕರ್ಫ್ಯೂನಿಂದಾಗಿ ಜಿಲ್ಲೆಯಲ್ಲಿ ಶನಿವಾರ ವಾಹನಗಳ ಸಂಚಾರ ವಿರಳವಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನರು ಮನೆಯಿಂದ ಹೊರ ಬರುತ್ತಿರುವ ದೃಶ್ಯ ಕಂಡು ಬಂದವು.
ಸಂಕ್ರಾಂತಿ ಹಬ್ಬ ಈ ಸಾರಿ ಜ.14 ಮತ್ತು 15ರಂದು ಎರಡು ದಿನ ಬಂದಿದ್ದರಿಂದ ತುಂಗಭದ್ರಾ ತೀರದಲ್ಲಿ ಪುಣ್ಯಸ್ನಾನಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಬರುತ್ತಿದ್ದರು. ಆದರೆ ಶನಿವಾರ ಲಾಕ್ಡೌನ್ ಮಾಡಿದ್ದರಿಂದ ಸೀಮಿತ ಸಂಖ್ಯೆಯ ಜನರು ಹುಲಿಗಿ, ಮುನಿರಾಬಾದ್ ಡ್ಯಾಂ, ನಗರಗಡ್ಡೆ, ಅಂಜನಾದ್ರಿ, ಸಣಾಪುರ, ನವವೃಂದಾವನ ಭಾಗದಲ್ಲಿ ಕಂಡು ಬಂದರು.
ನಗರದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚುವ ಮೂಲಕ ಮಾಲೀಕರು ಕರ್ಫ್ಯೂಗೆ ಬೆಂಬಲ ಸೂಚಿಸಿದ್ದಾರೆ. ದೂರ ದೂರುಗಳಿಂದ ನಗರಕ್ಕೆ ಬದುಕು ಕಟ್ಟಿಕೊಳ್ಳಲು ಬಂದಿರುವ ಕಟ್ಟಡ ಕಾರ್ಮಿಕರು, ರಸ್ತೆ ನಿರ್ಮಾಣ ಕಾರ್ಮಿಕರು ಎಂದಿನಂತೆ ತಮ್ಮ ದೈನಂದಿನ ಕೆಲಸದಲ್ಲಿ ನಿರತರಾಗಿದ್ದರು. ಕಾರ್ಖಾನೆಗಳ ನೌಕರರು ತಮ್ಮ ಕೆಲಸದಲ್ಲಿ ತೊಡಗಿಕೊಂಡಿರುವುದು ಕಂಡು ಬಂತು.
ಸರ್ಕಾರ ಸೂಚಿಸಿರುವ ಕಟ್ಟುನಿಟ್ಟಿನ ಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ಯಥಾವತ್ತಾಗಿ ಜಾರಿಗೆ ತರಲಾಗಿದೆ. ಪೊಲೀಸರು ನಗರದಮಳೆಮಲ್ಲೇಶ್ವರ ದೇವಸ್ಥಾನದ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿ, ಜೆಪಿ ಮಾರುಕಟ್ಟೆ, ಗವಿಮಠದ ರಸ್ತೆ ಸೇರಿದಂತೆವಿವಿಧ ಕಡೆಗಳಿಂದ ನಗರಕ್ಕೆ ಬರುವವರನ್ನು ತಡೆದು ಪರಿಶೀಲಿಸುವ ಕೆಲಸದಲ್ಲಿ ನಿರತರಾಗಿದ್ದರು. ಅನಗತ್ಯವಾಗಿ ನಗರದ ಕಡೆ ಬಂದವರಿಗೆ ದಂಡ ವಿಧಿಸುವ ಕೆಲಸವನ್ನು ಪೊಲೀಸರು ಮುಂದುವರೆಸಿದ್ದರು.
ಜಿಲ್ಲೆಯಾದ್ಯಂತ ಸಂಕ್ರಾಂತಿ ಹಬ್ಬದ ಆಚರಣೆಯಿರುವುದರಿಂದ ಸಾರ್ವಜನಿಕರು ಹಬ್ಬಕ್ಕೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ಎರಡು ದಿನಗಳ ಮುಂಚಿತವಾಗಿಯೇ ಖರೀದಿ ಮಾಡಿದ್ದಾರೆ. ಹೀಗಾಗಿ ಎಲ್ಲರು ತಮ್ಮ ಮನೆಗಳಲ್ಲಿಯೇ ಕೂತು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ವೈದ್ಯಕೀಯ ಸೇವೆ, ಹಾಲು, ಹಣ್ಣು ಮತ್ತು ತರಕಾರಿ ಮಾರಾಟ ಎಂದಿನಂತೆ ನಡೆಯಿತು. ನಗರ ಸಂಚಾರ ಬಸ್ಗಳ ಸಂಖ್ಯೆ ಓಡಾಟ ಪೂರ್ತಿಯಾಗಿ ಕಡಿಮೆಯಿತ್ತು. ಖಾಸಗಿವಾಹನಗಳ ಸಂಖ್ಯೆ ವಿರಳವಾಗಿತ್ತು. ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಇದ್ದರೂ ಸಾರ್ವಜನಿಕರ ಓಡಾಟ ಕೂಡ ಕಡಿಮೆಯಿತ್ತು.
ನಗರದಲ್ಲಿ ಆಟೋ ಸಂಚಾರ ಕಡಿಮೆ ಇತ್ತು. ಆದರೆ, ಹೋಟೆಲ್ಗಳಲ್ಲಿ ಪಾರ್ಸಲ್ಗೆ ಅವಕಾಶ ಕಲ್ಪಿಸಿದ್ದು, ಜನರು ಪಾರ್ಸಲ್ ತೆಗೆದುಕೊಂಡು ಹೋಗುತ್ತಿದ್ದರು. ಜಿಲ್ಲೆಯಲ್ಲಿ 2ನೇ ವಾರದವಾರಾಂತ್ಯಕರ್ಫ್ಯೂಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಪೊಲೀಸರಿಂದ ಕಾರ್ಯಾಚರಣೆ: ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5ರವರೆಗೆ ಎರಡನೇ ವಾರಾಂತ್ಯದ ಕರ್ಫೂ ಜಾರಿಗೆಗೊಂಡಿದ್ದು, ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಆದರೆ, ಮೊದಲ ವಾರಾಂತ್ಯದ ಕರ್ಫ್ಯೂ ಸಡಿಲಗೊಳಿಸದಂತೆ ಈ ಬಾರಿ ಯಾವುದೇ ವಿನಾಯತಿ ನೀಡಲು ಸಾಧ್ಯವಿಲ್ಲ ಎಂದು ಪೊಲೀಸ್ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದರು.
ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ಪೊಲೀಸರು ಆಯ್ದ ದ್ವಿಮುಖ ರಸ್ತೆಗಳಲ್ಲಿ ಒಂದೆಡೆ ಬ್ಯಾರಿಕೇಡ್ಗಳನ್ನು ಹಾಕಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಿದ್ದರು. ದ್ವಿ ಚಕ್ರವಾಹನ, ಅಟೋ, ಕಾರು, ಜೀಪು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ದಂಡದ ಬಿಸಿ ತೋರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.