ಮೃತ ದ್ಯಾಮಣ್ಣ ವಜ್ರಬಂಡಿ, ನೇತ್ರಾವತಿ ಹಾಗೂ ಸೋಮಪ್ಪ ಕುರುಬಡಿಗಿ
ಕೊಪ್ಪಳ: ಅತಿಯಾಗಿ ಕಿರುಕುಳ ನೀಡುತ್ತಿದ್ದ ಎನ್ನುವ ಕಾರಣಕ್ಕಾಗಿ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.
ಕೊಪ್ಪಳ ತಾಲ್ಲೂಕಿನ ಕೆಂಚನದೋಣಿ ತಾಂಡಾದ ಜಮೀನಿನಲ್ಲಿ ಜು. 26ರಂದು ಸುಟ್ಟು ಅರೆಬೆಂದ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ಜಮೀನಿನ ಮಾಲೀಕ ಗಂಗಪ್ಪ ನಾಯಕ ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ನಾಪತ್ತೆಯಾದ ವ್ಯಕ್ತಿಗಳ ಕುರಿತು ದಾಖಲಾದ ಪ್ರಕರಣಗಳ ಬಗ್ಗೆ ಪೊಲೀಸರು ತಡಕಾಡಿದಾಗ ಬೂದಗುಂಪ ಗ್ರಾಮದ ದ್ಯಾಮಣ್ಣ ವಜ್ರಬಂಡಿ (40) ಎಂಬಾತ ನಾಪತ್ತೆಯಾಗಿದ್ದು ಗೊತ್ತಾಗುತ್ತದೆ.
‘ತನಿಖೆಯ ಬಳಿಕ ದ್ಯಾಮಣ್ಣನದ್ದೇ ಮೃತದೇಹ ಎನ್ನುವುದು ಕೂಡ ಖಚಿತವಾಗುತ್ತದೆ. ತಾಲ್ಲೂಕಿನ ಕಾಮನೂರು ಗ್ರಾಮದ ಸೋಮಪ್ಪ ಕುರುಬಡಿಗಿ ಹಾಗೂ ದ್ಯಾಮಣ್ಣನ ಪತ್ನಿ ನೇತ್ರಾವತಿ ಸೇರಿಕೊಂಡು ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ಪ್ರಾಥಮಿಕ ವಿಚಾರಣೆಯಲ್ಲಿ ಗೊತ್ತಾಗಿದೆ‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ಧಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸೋಮಪ್ಪ, ನೇತ್ರಾವತಿ ಪ್ರೇಮಿಗಳಾಗಿದ್ದರು. ‘ಕೊಲೆ ಮಾಡಿದ ಸ್ಥಳಕ್ಕೂ ಮೃತದೇಹ ಪತ್ತೆಯಾದ ಸ್ಥಳಕ್ಕೂ ಸುಮಾರು ಐದಾರು ಕಿ.ಮೀ. ಅಂತರವಿದೆ. ಕೊಲೆ ಮಾಡಿದ ಬಳಿಕ ಸೋಮಪ್ಪ ಬೈಕ್ಮೇಲೆ ಮೃತದೇಹ ತೆಗದುಕೊಂಡು ಹೋಗಿದ್ದ. ನೇತ್ರಾವತಿಗೆ ಆಕೆಯ ಗಂಡ ನಿತ್ಯ ಕಿರುಕುಳ ಕೊಡುತ್ತಿದ್ದ. ಆರೋಪಿಗಳಬ್ಬರ ನಡುವೆ ಅನೈತಿಕ ಸಂಬಂಧವಿತ್ತು ಎನ್ನುವುದು ಗೊತ್ತಾಗಿದೆ’ ಎಂದು ಹೇಳಿದರು.
‘ಕೊಲೆ ಮಾಡಿ ಗುರುತು ಸಿಗದ ರೀತಿಯಲ್ಲಿ ಮೃತದೇಹ ಸುಟ್ಟು ಹಾಕಲಾಗಿತ್ತು. ಘಟನೆಗೆ ಸಂಬಂಧಿಸಿ ದೂರು ದಾಖಲಾದ ನಾಲ್ಕು ದಿನಗಳಲ್ಲಿಯೇ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ್ ಆರ್., ಕೊಪ್ಪಳ ಉಪವಿಭಾಗದ ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಗ್ರಾಮೀಣ ಸಿಪಿಐ ಸುರೇಶ ಡಿ. ಮುನಿರಾಬಾದ್ ಪಿಎಸ್ಐಗಳಾದ ಸುನೀಲ್ ಎಚ್., ಮಲ್ಲಪ್ಪ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.