ಕೊಪ್ಪಳ: ‘ಹಗಲಿರುಳು ತನ್ನ ಕುಟುಂಬದ ಏಳಿಗೆಗೆ ಶ್ರಮಿಸುತ್ತಿರುವ ಮಹಿಳೆಯ ಶ್ರಮ ಶ್ಲಾಘನೀಯ’ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಪ್ರಕಾಶ ವಿ. ಹೇಳಿದರು.
ಇತ್ತೀಚೆಗೆ ತಾಲ್ಲೂಕಿನ ಗಿಣಿಗೇರಾದಲ್ಲಿ ಗ್ರಾಮ ಪಂಚಾಯಿತಿಯಿಂದ ನಡೆದ ಮಹಿಳಾ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ‘ಇಂದಿನ ಯುಗ ಸ್ಪರ್ಧಾತ್ಮಕವಾಗಿದ್ದು, ಮಹಿಳೆಯರು ಎಲ್ಲಾ ರಂಗದಲ್ಲಿ ಸಬಲರಾಗುತ್ತಿದ್ದಾರೆ. ದೇಶದ ಸಂವಿಧಾನ ಕೂಡ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿ ಅವರ ಹಕ್ಕುಗಳನ್ನು ಎತ್ತಿ ಹಿಡಿದಿದೆ. ದೇಶ ಅಭಿವೃದ್ದಿ ಹೊಂದಿದೆ ಎನ್ನುವುದು ಮಹಿಳೆಯರಿಗೆ ಅಲ್ಲಿ ಹೇಗೆ ಹಕ್ಕುಗಳನ್ನು ನೀಡಲಾಗಿದೆ ಎನ್ನುವ ಆಧಾರದ ಮೇಲೆ ನಿರ್ಧರಿತವಾಗಿರುತ್ತದೆ’ ಎಂದರು.
ಕೊಪ್ಪಳ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಮಾತನಾಡಿ ‘ಮಕ್ಕಳ ಲಾಲನೆ-ಪಾಲನೆ, ಶಿಕ್ಷಣ, ಕುಟುಂಬ ನಿರ್ವಹಣೆ, ಕಚೇರಿ ಕೆಲಸ, ಶಿಕ್ಷಣ, ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಇತ್ಯಾದಿಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜ ನೀಡಿದ ಗುರುತರ ಜವಾಬ್ದಾರಿಯನ್ನು ಮಹಿಳೆ ನಿರ್ವಹಣೆ ಮಾಡುತ್ತಿದ್ದಾಳೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತೊಗಲುಗೊಂಬೆಯಾಟದ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಪಡೆದ ಭೀಮವ್ವ ಶಿಳ್ಳೇಕ್ಯಾತರ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜಿತಾ ಚವ್ಹಾಣ್, ತಾ.ಪಂ. ಸಹಾಯಕ ನಿರ್ದೇಶಕ ಮಹೇಶ್, ಪಿಡಿಒ ಮಂಜುಳಾದೇವಿ ಹೂಗಾರ, ಸದಸ್ಯರಾದ ಮಂಜುನಾಥ ಪಾಟೀಲ್, ಕರಿಯಪ್ಪ ಮೇಟಿ, ಲಕ್ಷ್ಮಣ ಡೊಳ್ಳಿನ, ಶಶಿಕಲಾ ಬಾಬು ಗುಡೇಕರ, ಮೈಲಾರಪ್ಪ ಕುಡ್ಲಿ, ಸುಮಂಗಲಾ ಶೇಕಪ್ಪ ಇಂದರಗಿ, ಎಸ್ಡಿಎಂಸಿ ಅಧ್ಯಕ್ಷ ಮರಿಯಪ್ಪ ಶಿಡ್ಲೆಪ್ಪನವರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.