
ಯಲಬುರ್ಗಾ: ‘ಹಲವು ಪವಾಡಗಳಿಂದ ಖ್ಯಾತರಾಗಿ, ಬ್ರಹ್ಮಚಾರಿಯಾಗಿ ಭಕ್ತರ ಪಾಲಿಗೆ ನಡೆದಾಡುವ ದೇವರಾಗಿದ್ದ ಸಂತ ಸೇವಾಲಾಲರ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಅನುಕರಣೀಯವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ, ತಾಲ್ಲೂಕು ಗೋರಸೇವಾ ಸಂಘ, ಬಂಜಾರ ನೌಕರರ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸೇವಾಲಾಲ ಮಹಾರಾಜರ ಜಯಂತಿ ಹಾಗೂ ಜಾಗೃತಿ ಸಭೆಯಲ್ಲಿ ಮಾತನಾಡಿದರು.
‘ವಿಶೇಷ ಸಂಸ್ಕೃತಿ ಹಾಗೂ ಧಾರ್ಮಿಕತೆ ಹೊಂದಿರುವ ಬಂಜಾರ ಸಮಾಜದವರು ಶ್ರಮಿಕರು ಹಾಗೂ ಕಾಯಕ ನಿಷ್ಠೆಯುಳ್ಳವರು. ಇಂತಹ ಸಮಾಜದ ಒಬ್ಬ ಸಂತ ಇತರೆ ಸಮಾಜದವರ ಪ್ರೀತಿಗೂ ಪಾತ್ರರಾಗುತ್ತಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ’ ಎಂದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಆನಂದ ಉಳ್ಳಾಗಡ್ಡಿ ಮಾತನಾಡಿ,‘ಸೇವಾಲಾಲರು ಕೇವಲ ಸಮಾಜ ಸುಧಾರಕರಲ್ಲ. ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಪರಿಣತಿ ಪಡೆದು ಜನರ ಜೀವ ಮತ್ತು ಜೀವನ ಉಳಿಸಿದವರು’ ಎಂದು ಹೇಳಿದರು.
ಮಾರನಾಳದ ಚಂದಾಲಾಲಾ ಪೂಜಾರ ಹಾಗೂ ಬಂಜಾರ ಧರ್ಮಗುರು ಹೇಮಗಿರಿ ಗೋಸಾವಿ ಬುವಾನ ಅವರು ಸಾನ್ನಿಧ್ಯ ವಹಿಸಿದ್ದರು. ಬಂಜಾರ ಸಮಾಜದ ಅಧ್ಯಕ್ಷ ಸೀನಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಇದಕ್ಕೂ ಮುನ್ನ ಪಟ್ಟಣದ ವಿವಿಧ ಬೀದಿಗಳಲ್ಲಿ ಸೇವಾಲಾಲರ ಭಾವಚಿತ್ರದ ಮೆರವಣಿಗೆ ಜರುಗಿತು. ಸಮಾಜದ ಮಹಿಳೆಯರ ನೃತ್ಯ ಗಮನ ಸೆಳೆಯಿತು.
ಗೋರ ಸೇನಾ ತಾಲ್ಲೂಕಾಧ್ಯಕ್ಷ ಶಿವಮೂರ್ತಿ ರಾಠೋಡ, ಗಣ್ಯರಾದ ವೀರನಗೌಡ ಬಳೂಟಗಿ, ನವೀನಕುಮಾರ ಗುಳಗಣ್ಣವರ, ಬಸವರಾಜ ಗೌರಾ, ಸಂಗಣ್ಣ ತೆಂಗಿನಕಾಯಿ, ರಾಮಣ್ಣ ಸಾಲಭಾವಿ, ಮಲ್ಲನಗೌಡ ಕೋನನಗೌಡ್ರ, ಯಲ್ಲಪ್ಪ ನಾಯಕ, ಲೋಕಪ್ಪ ನಾಯ್ಕ, ಸುರೇಶಗೌಡ ಶಿವನಗೌಡ್ರ, ಕೋನನಗೌಡ್ರ ನಾಗರಾಜ ನಾಯ್ಕ, ಪರಸಪ್ಪ ನಾಯ್ಕ, ತಿರುಪತಿ ಬಸರಿಗಿಡದ, ಬಸವರಾಜ ನಾಯ್ಕ, ಸುರೇಶ ರಾಠೋಡ, ಗಣೇಶ ನಾಯ್ಕ, ಯಮನೂರ ನಾಯ್ಕ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.