ಕನಕಗಿರಿ: ಪಟ್ಟಣದ ಶ್ರೀಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮಾಹಿತಿ ಕೋಶ ಹಾಗೂ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಗುರುವಾರ ಯುವನಿಧಿ ಹಾಗೂ ಮಹಿಳಾ ಜಾಗೃತಿ ಕಾರ್ಯಕ್ರಮ ನಡೆಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಹಜರತ ಹುಸೇನ ಮಾತನಾಡಿ, ಯುವನಿಧಿ ಯೋಜನೆಗೆ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಚಾಲನೆ ನೀಡಲಾಗಿದ್ದು,
2023-24ನೇ ಸಾಲಿನಲ್ಲಿ ಪದವಿ, ಡಿಪ್ಲೊಮಾ ತೇರ್ಗಡೆ ಆಗಿ 6 ತಿಂಗಳಿಂದ ಉದ್ಯೋಗ ಸಿಗದೆ ಇರುವವರಿಗೆ ಮಾತ್ರ ಅನ್ವಯವಾಗಲಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಸದಸ್ಯ ನೀಲಕಂಠ ಬಡಿಗೇರ ಮಾತನಾಡಿ, ಯುವನಿಧಿ ಯೋಜನೆ ಮೂಲಕ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂಪಾಯಿ ಹಾಗೂ ಡಿಪ್ಲೊಮಾ ಪಾಸ್ ಆಗಿರುವ ನಿರುದ್ಯೋಗಿಗಳಿಗೆ 1500 ರೂಪಾಯಿ ಸಿಗಲಿದೆ. ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳಿಗೆ ಮಾತ್ರ ನೀಡಲಾಗುತ್ತದೆ.
ಫಲಾನುಭವಿಯು 2 ವರ್ಷಗಳ ಅವಧಿಯಲ್ಲಿ ಉದ್ಯೋಗ ಕಂಡುಕೊಂಡರೆ ನಿರುದ್ಯೋಗ ಭತ್ಯೆಯನ್ನು ನಿಲ್ಲಿಸಲಾಗುತ್ತದೆ ಎಂದರು.
ಮಹಿಳಾ ಹಕ್ಕುಗಳು, ಒಂದೇ ಸೂರಿನಡಿ ಹಲವು ಯೋಜನೆಗಳು, ಫೋಕ್ಸೊ, ಮಹಿಳಾ ದೌರ್ಜನ್ಯ ಪ್ರಕರಣಗಳು, ಬಾಲ್ಯವಿವಾಹ, ಭ್ರೂಣ ಹತ್ಯೆ ಪ್ರಕರಣದ ಕಾನೂನುಗಳ ಕುರಿತು ವಿಶೇಷ ತಜ್ಞೆ ಫಾತೀಮಾ ಅವರು ಮಾಹಿತಿ ನೀಡಿದರು.
ಸಮಾಲೋಚಕಿ ದುರ್ಗಾ ಎನ್ ಅವರು ಹದಿಹರೆಯದ ವಯಸ್ಸಿನಲ್ಲಿ ಆಗುವಂತಹ ತಪ್ಪು ನಡೆಗಳ ಕುರಿತು ಮಕ್ಕಳಿಗೆ ತಿಳಿವಳಿಕೆ ಮೂಡಿಸಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ಬಜರಂಗ ಬಲಿ ಮಾತನಾಡಿದರು. ಗ್ಯಾರಂಟಿ ಯೋಜನೆಯ ಸಮಿತಿಯ ಸದಸ್ಯರಾದ ಜಗದೀಶಪ್ಪ, ಭೀಮೇಶ ಕೆ.ಮಲ್ಲಾಪುರ, ಹನುಮಮ್ಮ ಯಂಕನಗೌಡ ಪಾಟೀಲ್, ವೀರೇಶ ನವಲಿ, ಕನಕಪ್ಪ ತಳವಾರ, ಜಿಲ್ಲಾ ಮಿಷನ್ ಸಂಚಾಲಕರಾದ ಶ್ರೀದೇವಿ, ಶ್ಯಾನ್ಬೋಗ, ಸಹಾಯಕ ಪ್ರಾಧ್ಯಾಪಕರಾದ ಡಾ. ಆಶಿಕಾ ಎಚ್.ಸಿ, ಲಲಿತಾ ಎನ್.ಕಿನ್ನಾಳ, ಮರ್ವಿನ್ ಡಿಸೋಜ್, ಡಾ.ವೀರೇಶ ಕೆಂಗಲ್, ರಕ್ಷಿತ್ ಎ, ಉಪನ್ಯಾಸಕ ಬಾಳಪ್ಪ ಸುಳೇಕಲ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.