ADVERTISEMENT

ಅಪಾಯಕ್ಕೆ ಆಹ್ವಾನ ನೀಡುವ ಸೇತುವೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2011, 11:40 IST
Last Updated 3 ಜನವರಿ 2011, 11:40 IST

ಶ್ರೀರಂಗಪಟ್ಟಣ: ತಾಲ್ಲೂಕಿನ ರಾಂಪುರ- ಕೆಂಗಾಲ್‌ಕೊಪ್ಪಲು ನಡುವೆ ಅಡ್ಡಹಳ್ಳಕ್ಕೆ ನಾಲ್ಕು ದಶಕಗಳ ಹಿಂದೆ ನಿರ್ಮಿಸಿರುವ ಸೇತುವೆ ಪೂರ್ಣ ಶಿಥಿಲಗೊಂಡು ಅಪಾಯದ ಅಂಚಿನಲ್ಲಿದೆ.  ಸೇತುವೆ ಇಕ್ಕೆಲಗಳಲ್ಲಿನ ತಡೆಗೋಡೆಗಳು ಕುಸಿದು ಬಿದ್ದಿವೆ. ಕಿರಿದಾದ ತಿರುವಿನಲ್ಲಿರುವ ಈ ಸೇತುವೆ ಮೇಲೆ ಚಲಿಸುವ ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ಹೋಗಬೇಕು.

ಪಿಎಸ್‌ಎಸ್‌ಕೆ ಕಾರ್ಖಾನೆಗೆ ಕಬ್ಬು ಸಾಗಿಸುವ ಭರ್ತಿ ಎತ್ತಿನ ಗಾಡಿ ಹಾಗೂ ಲಾರಿಗಳು ಈ ಸೇತುವೆ ಮೇಲೆಯೇ ತೆರಳಬೇಕು. ಹೀಗೆ ಹೋಗುವವರು ಎಚ್ಚರಿಕೆಯಿಂದ ತೆರಳಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಗಾಡಿ, ಲಾರಿ ಹಳ್ಳಕ್ಕೆ ಉರುಳುತ್ತವೆ. ಈಗಾಗಲೇ ಶಿಥಿಲಾವಸ್ಥೆ ತಲುಪಿರುವ ಈ ಸೇತುವೆ ಮೇಲೆ ಹೋಗುವುದು ಅಪಾಯ ಎಂದುಕೊಂಡು ನಾಲ್ಕಾರು ಕಿ.ಮೀ. ಸುತ್ತಿ ಬಳಸಿ ಕಾರ್ಖಾನೆ, ಆಲೆಮನೆಗಳಿಗೆ ರೈತರು ಕಬ್ಬು ಸಾಗಿಸುತ್ತಿದ್ದಾರೆ.

ಹತ್ತಾರು ವರ್ಷಗಳಿಂದ ಈ ಸೇತುವೆ ಇದೇ ಸ್ಥಿತಿಯಲ್ಲಿದೆ. ಪ್ರತಿದಿನ ನೂರಾರು ವಾಹನಗಳು ಇಲ್ಲಿ ಚಲಿಸುತ್ತವೆ. ರೈತರಿಗೆ ಇದು ಪ್ರಮುಖ ಸಂಪರ್ಕ ರಸ್ತೆಯಾಗಿದೆ.ತಡೆಗೋಡೆ ಕಾರಣ, ಬೈಕ್ ಸವಾರರು ಹಳ್ಳದಲ್ಲಿ ಬಿದ್ದು, ಕೈ, ಕಾಲು ಮುರಿದುಕೊಳ್ಳುತ್ತಿದ್ದಾರೆ ಇಷ್ಟಾದರೂ ಸೇತುವೆ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನೀರಾವರಿ ಹಾಗೂ ಲೋಕೋಪಯೋಗಿ ಎರಡೂ ಇಲಾಖೆಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ ಎಂದು ರಾಂಪುರದ ರೈತ ವೆಂಕಟೇಶ್, ಲಾಲಿಪಾಳ್ಯದ ಮಹದೇವು ಇತರರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.