ಮಂಡ್ಯ: ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಮಂಗಳವಾರ ನಗರದಲ್ಲಿ ಆಚರಿಸಲಾಯಿತು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ನೆಹರು ಯುವ ಕೇಂದ್ರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ವಾರ್ತಾ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾವೇರಿ ಉದ್ಯಾನದಲ್ಲಿರುವ ಗಾಂಧೀಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸರ್ವ ಧರ್ಮಗಳ ಪ್ರಾರ್ಥನೆ ನಡೆಸಲಾಯಿತು.
ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಡಾ. ಲೀಲಾ ಅಪ್ಪಾಜಿ, ಗಾಂಧೀಜಿ ಅವರು ವ್ಯಕ್ತಿಯಲ್ಲ, ಶಕ್ತಿ ಎಂದು ಬಣ್ಣಿಸಿದರು.
ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಅವರು ಗಾಂಧೀಜಿ ಕುರಿತು; ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಸಿ.ಜಯಣ್ಣ, ಲಾಲ್ ಬಹದ್ದೂರ್ ಶಾಸ್ತ್ರಿ ಕುರಿತು ಮಾತನಾಡಿದರು. ಈ ಇಬ್ಬರೂ ಮಹಾನೀಯರ ಕರ್ತವ್ಯ ನಿಷ್ಠೆ, ದೇಶಪ್ರೇಮ, ಸತ್ಯ, ಪ್ರಾಮಾಣಿಕತೆ, ಹೋರಾಟದ ಬದುಕಿನ ಬಗೆಗೆ ಗುಣಗಾನ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠ ಕೌಶಲೇಂದ್ರ ಕುಮಾರ್, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿ.ರಾಜು, ಜಿಲ್ಲಾ ವಾರ್ತಾಧಿಕಾರಿ ಆರ್.ರಾಜು ಇತರರು ಇದ್ದರು. ವೈರಮುಡಿ ಹಾಗೂ ತಂಡದವರು ಭಕ್ತಿ ಗೀತೆಗಳು, ಮತದಾರರ ಜಾಗೃತಿ ಕುರಿತು ನಾಟಕ ಪ್ರದರ್ಶಿಸಿದರು.
ಕಾಳೇಗೌಡ ಪ್ರೌಢಶಾಲೆ: ಇಲ್ಲಿನ ಡಾ. ಎಂ.ಎಸ್.ರಾಜೇಂದ್ರಪ್ರಸಾದ್ ಸ್ಮಾರಕ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ರಾಜು ಸೇರಿದಂತೆ ಹಲವರು ಇದ್ದರು.
ಜೈ ಭಾರತ್ ಮಾತಾ ಎಜುಕೇಷನ್ ಟ್ರಸ್ಟ್: ಇಲ್ಲಿನ ಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್ನ ಕಾರ್ಯದರ್ಶಿ ಎಲ್.ರಾಜಣ್ಣ, ಅತಿಥಿಯಾಗಿ ಚಲುವೇಗೌಡ ಹಾಜರಿದ್ದರು. ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಲಾಯಿತು.
ಜಿಜಿಎಂಎಸ್: ನಗರದ ಕೆಆರ್ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ಸವಿತಾ ನಾಗರಾಜು, ಮುಖ್ಯ ಶಿಕ್ಷಕ ರಾಚಯ್ಯ, ಸಹ ಶಿಕ್ಷಕರಾದ ಲಿಂಗರಾಜು, ವೀಣಾ, ಎ.ಜ್ಯೋತಿಲಕ್ಷ್ಮಿ, ಶಿಕ್ಷಣ ಸಂಯೋಜಕ ಬಿ.ಎಸ್.ಅಪ್ಪಾಜಿ ಭಾಗವಹಿಸಿದ್ದರು.
`ಪ್ರವಾಸಿ ತಾಣವಾಗಿ ಗಾಂಧಿ ಸ್ಮಾರಕ~
ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ಪಶ್ಚಿಮವಾಹಿನಿ ಬಳಿ ಇರುವ ಗಾಂಧೀಜಿ ಚಿತಾಭಸ್ಮ ಸ್ಮಾರಕವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ಗಾಂಧಿ ಜಯಂತಿ ಅಂಗವಾಗಿ ಪಶ್ಚಿಮವಾಹಿನಿಯ ಗಾಂಧೀಜಿ ಚಿತಾಭಸ್ಮ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಸ್ಮಾರಕದ ಸುತ್ತ ತಂತಿಬೇಲಿ ನಿರ್ಮಿಸಲಾಗುವುದು. ಉದ್ಯಾನವನ, ಕಾರಂಜಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಸಿಮೆಂಟ್ ನೆಲಹಾಸು ಹಾಗೂ ಮೆಟ್ಟಿಲು ಹಾಕಿಸಿ ಪ್ರವಾಸಿಗರ ವಿಶ್ರಾಂತಿ ತಾಣವಾಗಿ ಮಾರ್ಪಡಿಸಲಾಗುವುದು. ಸ್ಥಳೀಯ ಪುರಸಭೆಯಿಂದ ಸುಮಾರು ರೂ. 5 ಲಕ್ಷ ವೆಚ್ಚದಲ್ಲಿ ಗಾಂಧಿ ಸ್ಮಾರಕ ಸ್ಥಳ ಅಭಿವೃದ್ಧಿಯಾಗಲಿದೆ. ಪ್ರವಾಸೋದ್ಯಮ ಇಲಾಖೆಯಿಂದಲೂ ನೆರವು ಪಡೆದು ಆಕರ್ಷಣೀಯ ತಾಣವನ್ನಾಗಿ ರೂಪಿಸಲು ಚಿಂತನೆ ನಡೆದಿದೆ ಎಂದರು.
ಗಾಂಧಿ ಚಿತಾಭಸ್ಮ ಸ್ಮಾರಕದ ಆಸುಪಾಸಿನಲ್ಲಿ ಕಾವೇರಿ ನದಿಯಲ್ಲಿ ಬಿದ್ದಿದ ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಯಿತು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳು, ಭಾರತ್ ನಿರ್ಮಾಣ್ ಸ್ವಯಂ ಸೇವಕರು, ಪೌರ ಕಾರ್ಮಿಕರು ಹಾಗೂ ಪುರಸಭೆ ಸಿಬ್ಬಂದಿ ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಪಾಂಡವಪುರ ಉಪ ವಿಭಾಗಾಧಿಕಾರಿ ಲತಾ, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ ಕೃಷ್ಣಪ್ಪ, ಉಪಾಧ್ಯಕ್ಷೆ ಗಾಯತ್ರಿ, ಸದಸ್ಯರಾದ ಎಂ.ಎಲ್.ದಿನೇಶ್, ಅಣ್ಣಯ್ಯ, ಪದ್ಮಮ್ಮ, ರಾಮೇಗೌಡ, ಆರ್.ಕೃಷ್ಣ, ನಿಂಗಮ್ಮ ಇತರರು ಇದ್ದರು.
ಪ್ರಗತಿಯ ಹೆಜ್ಜೆಗೆ ಗಾಂಧೀಜಿ ಬುನಾದಿ
ಪಾಂಡವಪುರ: ಗಾಂಧೀಜಿ ಅವರ ತ್ಯಾಗ ಪರಿಶ್ರಮದಿಂದಾಗಿಯೇ ಸ್ವರಾಜ್ಯವನ್ನು ಪಡೆದಿರುವ ನಾವು ಪ್ರಗತಿಯತ್ತ ದಾಪುಗಾಲು ಹಾಕಲು ಸಾಧ್ಯವಾಗಿದೆ ಎಂದು ಉಪವಿಭಾಗಾಧಿಕಾರಿ ಅರ್.ಲತಾ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ಮಹಾತ್ಮಗಾಂಧೀಜಿ ಅವರ 144ನೇ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಾಂಧೀಜಿಯವರು ದೇಶಕ್ಕೆ ಸ್ವತಂತ್ರ ತಂದುಕೊಡುವುದರ ಜತೆಗೆ ದೇಶದಲ್ಲಿರುವ ವಿವಿಧ ಜನಾಂಗದ ಜನರು, ಭಾಷೆ, ಧರ್ಮ, ಸಂಸ್ಕೃತಿಗಳನ್ನು ಸಮಾನಾಂತರವಾಗಿ ನೋಡಿ ರಾಷ್ಟ್ರವನ್ನು ಬಲಿಷ್ಠಗೊಳಿಸಲು ಶ್ರಮಿಸಿದರು ಎಂದರು. ಶಾಸಕ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.