ADVERTISEMENT

ದಸರಾ ಬನ್ನಿಮಂಟಪ ಸ್ವಚ್ಛತೆ ಶುರು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಅ.18 ರಿಂದ 5 ದಿನಗಳ ಕಾಲ ದಸರಾ ಉತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ಕಿರಂಗೂರು ಸರ್ಕಲ್ ಬಳಿಯ ದಸರಾ ಬನ್ನಿಮಂಟಪ ಸ್ವಚ್ಛಗೊಳಿಸುವ ಕಾರ್ಯ ಶುಕ್ರವಾರ ಶುರುವಾಯಿತು.

ಪ್ರತಿ ವರ್ಷ ಇಲ್ಲಿ ಬನ್ನಿ ಪೂಜೆ ನಡೆಸಿಕೊಂಡು ಬರುತ್ತಿರುವ ಬಿ.ಎಂ.ಸುಬ್ರಹ್ಮಣ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ಸಂದೇಶ್ ಅವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ಬಾಬುರಾಯನಕೊಪ್ಪಲು ರಂಗನಾಥ ಐಟಿಐ ಕಾಲೇಜು ವಿದ್ಯಾರ್ಥಿಗಳು ಮಂಟಪದ ಆವರಣ ಹಾಗೂ ಮೇಲ್ಭಾಗದಲ್ಲಿ ಬೆಳೆದಿದ್ದ ಗಿಡಗಳನ್ನು ಕತ್ತರಿಸಿದರು. ಮೇಲ್ಛಾವಣಿಯಲ್ಲಿದ್ದ ಮಣ್ಣು, ತರಗು ಗುಡಿಸಿ ಹಸನು ಮಾಡಿದರು.

~ಪಟ್ಟಣದಲ್ಲಿ ಕಳೆದ ಐದು ವರ್ಷಗಳಿಂದ ದಸರಾ ಉತ್ಸವಕ್ಕೆ ಮರು ಜೀವ ನೀಡಲಾಗಿದೆ. ಈ ಬಾರಿ ದಸರಾ ಉತ್ಸವಕ್ಕಾಗಿ ಮೈಸೂರು ದಸರಾ ಆಚರಣಾ ಸಮಿತಿಯಿಂದ ಜಿಲ್ಲಾಡಳಿತಕ್ಕೆ ರೂ.25 ಲಕ್ಷ ಹಣ ಬಿಡುಗಡೆ ಆಗಿದೆ. ಮತ್ತಷ್ಟು ಹಣ ಬರುವ ನಿರೀಕ್ಷೆ ಇದೆ~ ಎಂದು ತಹಶೀಲ್ದಾರ್ ಅರುಳ್‌ಕುಮಾರ್ ತಿಳಿಸಿದ್ದಾರೆ.

ಶ್ರೀರಂಗಪಟ್ಟಣ ವಿಜಯನಗರ ಅರಸರ ಪಾಳೇಪಟ್ಟಿಗೆ ಒಳಪಟ್ಟಿದ್ದ ಕಾಲದಲ್ಲಿ ಈ ದಸರಾ ಬನ್ನಿಮಂಟಪ ನಿರ್ಮಾಣಗೊಂಡಿದೆ. ಕಲ್ಲುಗಳನ್ನು ಬಳಸಿ ಈ ಮಂಟಪ ನಿರ್ಮಿಸಲಾಗಿದೆ. 16 ಸ್ತಂಭಗಳ ಈ ಮಂಟಪದಲ್ಲಿ ಉಬ್ಬು ಶಿಲ್ಪಗಳು ಗಮನ ಸೆಳೆಯುತ್ತವೆ. ಈ ಸ್ಮಾರಕವನ್ನು ತಾಲ್ಲೂಕು ಆಡಳಿತ 2011ರಲ್ಲಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.