ಮಂಡ್ಯ: ನಗರದ ಅಂಗವಿಕಲ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ರೇಖಾ ಹಾಗೂ ಜಯಂತ್ ಅವರ ವಿದ್ಯಾಭ್ಯಾಸ ಮತ್ತು ಚಿಕಿತ್ಸೆಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ನೆರವು ದೊರಕಿಸಿಕೊಡುವುದಾಗಿ ಕೇಂದ್ರದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಭರವಸೆ ನೀಡಿದ್ದಾರೆ.
ಕೆಪಿಸಿಸಿ ಸದಸ್ಯ ಟಿ.ಎಸ್.ಸತ್ಯಾನಂದ ಅವರೊಂದಿಗೆ ಸಚಿವರ ಬೆಂಗಳೂರಿನ ನಿವಾಸದಲ್ಲಿ ಇತ್ತೀಚೆಗೆ ಭೇಟಿಯಾಗಿ ಪೋಷಕರು ಮನವಿ ಮಾಡಿಕೊಂಡರು.
`ಕೇಂದ್ರದ ಆರೋಗ್ಯ ಸಚಿವರೊಂದಿಗೆ ವೈಯಕ್ತಿಕವಾಗಿ ಚರ್ಚೆ ನಡೆಸಿ ಚಿಕಿತ್ಸಾ ವ್ಯವಸ್ಥೆ ಮಾಡುವುದರ ಜೊತೆಗೆ ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ದೊರಕಿಸಿ ಕೊಡುತ್ತೇನೆ ಎಂದರು.
ಮಕ್ಕಳ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆ ಇದ್ದು, ಅದನ್ನು ಭರಿಸಲು ನಮ್ಮಂತಹ ಬಡ ಕುಟುಂಬಗಳಿಂದ ಸಾಧ್ಯವಿಲ್ಲ. ಆದ್ದರಿಂದ ನೆರವು ಒದಗಿಸಿಕೊಡಬೇಕು ಎಂದು ಕೋರಿದರು.
ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ 12.50 ಲಕ್ಷ ರೂಪಾಯಿ ಬಹುಮಾನ ಗೆದ್ದುಕೊಂಡಿದ್ದು, ಅದರಲ್ಲಿ 5 ಲಕ್ಷ ರೂಪಾಯಿಯಷ್ಟು ತೆರಿಗೆ ರೂಪದಲ್ಲಿ ಕಡಿತ ಮಾಡಲಾಗುತ್ತಿದೆ. ವಿಶೇಷ ಪ್ರಕರಣ ಎಂದು ಪರಿಗಣಿಸಿ, ತೆರಿಗೆ ವಿನಾಯಿತಿ ಒದಗಿಸಿಕೊಡಬೇಕು ಎಂದು ರೇಖಾ ಮನವಿ ಮಾಡಿದರು. ಈ ಕುರಿತು ಹಣಕಾಸು ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.