ಮಳವಳ್ಳಿ: ಬಾಲಕಿಗೆ ವಿವಾಹ ಮಾಡಿದ ಪೋಷಕರು ಮತ್ತು ವರ ಅವನ ತಂದೆ ತಾಯಿಯ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ ವಿವರ: ತಾಲ್ಲೂಕಿನ ನೆಟ್ಕಲ್ ಗ್ರಾಮದ ಚಂದ್ರು ಅವರ ಮಗಳು 16 ವರ್ಷದ ಪಿ.ಸಿ. ಶ್ರುತಿ ಎಂಬ ಬಾಲಕಿಗೆ ತಾಲ್ಲೂಕಿನ ಪಂಡಿತಹಳ್ಳಿಯ, ಪಟ್ಟಣದ ವಾಸವಾಗಿರುವ ಎನ್. ಇ.ಎಸ್. ಬಡಾವಣೆ ನಿವಾಸಿ ಚಿಕ್ಕಣ್ಣ ಅವರ ಪುತ್ರ ನಾಗೇಂದ್ರ ಅವರೊಡನೆ ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಶುಕ್ರವಾರ ವಿವಾಹ ನಡೆಯುತ್ತಿತ್ತು. ಆದರೆ, ವಧುವಿಗೆ ಇನ್ನೂ ಹದಿನೆಂಟು ವರ್ಷವಾಗಿಲ್ಲ ಎಂಬ ಮಾಹಿತಿ ಬಂದ ಕಾರಣ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಅರುಂಧತಿ ಅವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಜತೆ ವಿವಾಹ ನಿಲ್ಲಿಸಲು ಸಮುದಾಯಭವನಕ್ಕೆ ಹೋದರು ಆದರೆ, ಆಗಮಿಸುವ ಮೊದಲೇ ವಧುವಿಗೆ ತಾಳಿ ಕಟ್ಟಿಸಲಾಗಿತ್ತು.
ಧಾರಾ ಸಮಯ ಬೆಳಿಗ್ಗೆ 9.30ಕ್ಕೆ ನಿಗದಿಯಾಗಿದ್ದು ಆದರೆ ಅಧಿಕಾರಿಗಳು ಬರುವ ಮುನ್ಸೂಚನೆ ಗೊತ್ತಾಗಿ 8.50ಕ್ಕೆ ತಾಳಿ ಕಟ್ಟಿಸಲಾಗಿತ್ತು ಎನ್ನಲಾಗಿದೆ. ನಂತರ ಅಧಿಕಾರಿಗಳು ಬಾಲಕಿಯನ್ನು ವಯಸ್ಸನ್ನು ವಿಚಾರಿಸಿದಾಗ 16 ವರ್ಷ ಎಂದು ಹೇಳಿದ ಹಿನ್ನಲೆಯಲ್ಲಿ, ಬಾಲಕಿ ಧರಿಸಿದ್ದ ಆಭರಣಗಳನ್ನು ತೆಗೆಸಿ ಮಕ್ಕಳ ರಕ್ಷಣಾ ಘಟಕದ ವಶಕ್ಕೆ ಒಪ್ಪಿಸಿ, ಪೋಷಕರ ವಿರುದ್ದ ದೂರು ನೀಡಲಾಗಿದೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿಯೋಜನಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಾಜೇಂದ್ರ, ಮಾನಸಾ, ಮಕ್ಕಳ ಸಹಾಯವಾಣಿಯ ಶುಭಾ, ಗ್ರಾಮಾಂತರ ಪೊಲೀಸ್ಠಾಣೆ ಪಿಎಸ್ಐ ಸುಬ್ಬಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.