ಮಂಡ್ಯ: ಮೂಢನಂಬಿಕೆ, ಅರ್ಥವಿಲ್ಲದ ಆಚರಣೆಯಿಂದ ರೋಸಿ ಹೋಗಿದ್ದ ದೇಶದ ಜನರಿಗೆ ಬೆಳಕಾಗಿ, ಸಮಾಜ ಪರಿವರ್ತನೆ ಮಾಡಿದ ಗೌರವ ಗೌತಮ ಬುದ್ಧನಿಗೆ ಸಲ್ಲುತ್ತದೆ. ಅವರು ಸರ್ವಕಾಲಕ್ಕೂ ಪ್ರಾತಃಸ್ಮರಣೀಯರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಬುಧವಾರ ಸಿದ್ಧಾರ್ಥ ಟ್ರಸ್ಟ್ ಉದ್ಘಾಟನೆ ಹಾಗೂ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೌದ್ಧ ಧರ್ಮ ಸ್ಥಾಪನೆ ಮಾಡಿ ಸಮಾಜದ ಒಳಿತಿಗಾಗಿ ಆಚಾರ, ವಿಚಾರ, ತತ್ವವನ್ನು ಭೋದಿಸಿದ್ದಾರೆ ಎಂದರು.
ಸಮಾಜದ ಕಟ್ಟ ಕಡೆಯ ಜನರ ನೋವು, ನಲಿವುಗಳಿಗೆ ಸ್ಪಂದಿಸುವ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಜನರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಸಿ. ಜಯಣ್ಣ ಮಾತನಾಡಿ, ಭಗವಾನ್ ಬುದ್ಧರು ಏಷ್ಯಾದ ಜ್ಯೋತಿ ಇದ್ದಂತೆ. ಜ್ಞಾನದ ಬೆಳಕನ್ನು ಕೊಟ್ಟ ಮಹಾನ್ ಪ್ರವರ್ತಕರು. ಈ ಕಾರಣಕ್ಕಾಗಿ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಅವರ ಅನುಯಯಿಗಳು ಇದ್ದಾರೆ ಎಂದು ಹೇಳಿದರು.
ಸಿದ್ಧಾರ್ಥ ಟ್ರಸ್ಟ್ ಅಧ್ಯಕ್ಷ ಎಂ.ಬಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠ ಭೂಷಣ್ ಜಿ. ಬೊರಸೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ. ಸಂಗಯ್ಯ, ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್. ಸಿದ್ದರಾಮಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಇ.ವಿ. ವೆಂಕಟರಮಣರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿ. ವಿಮಲಾ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಂ.ಎನ್. ಶ್ರೀನಿವಾಸಮೂರ್ತಿ, ಬೊಮ್ಮಯ್ಯ, ಕುಬೇರಪ್ಪ, ಮುಕುಂದ, ಅಮ್ಮದ್ಪಾಷ, ಎಂ.ವಿ. ಕೃಷ್ಣ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.