ಕಿಕ್ಕೇರಿ: ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಸಕೊಂತನ ಹಬ್ಬ ಶುಕ್ರವಾರ ನಡೆಯಿತು.
ವಸಂತನ (ವಸಕೊಂತ) ಹಬ್ಬವು ಕಿಕ್ಕೇರಮ್ಮ ಗುಡಿಯಿಂದ ಮಧ್ಯಾಹ್ನ ಆರಂಭವಾಯಿತು. ಕಿಕ್ಕೇರಮ್ಮ ಹಾಗೂ ಗಂಡನಾದ ಲಕ್ಷ್ಮೀನರಸಿಂಹಸ್ವಾಮಿಯನ್ನು ಓಲೈಸಿ ಸಮಾಗಮ ಮಾಡಿಸುವ ಜನಪದ ಕಥೆಯ ಹಬ್ಬವಾದ ಈ ವಸಂತನ ಹಬ್ಬಕ್ಕೆ ರಂಗೇನಹಳ್ಳಿಯ ಗುಡ್ಡಧಾರಿಗಳೇ ಸೂತ್ರಧಾರಿಗಳಾಗಿ ಬಂದರು. ಗುಡ್ಡಪ್ಪ ಚಿಕ್ಕೆಗೌಡ ಮರದಲ್ಲಿ ನಿರ್ಮಿತವಾದ ಕೊಂತಪ್ಪ ದೇವರೆನ್ನುವ ಪುರುಷ ಗುಪ್ತಾಂಗವನ್ನು ಸೊಂಟಕ್ಕೆ ಕಟ್ಟಿ, ಕೆಂಪು ವರ್ಣದ ರುಮಾಲು, ಹಸಿರು ಶಾಲು, ಕಾಲಿಗೆ ಗೆಜ್ಜೆ ಕಟ್ಟಿ ದೇವಿಯ ಮೆರವಣಿಗೆಯೊಂದಿಗೆ ಊರಲೆಲ್ಲ ಕುಣಿದರು.
ಗುಡ್ಡಪ್ಪನ ಕುಣಿತವನ್ನು ನೋಡಿ ಜನರು ನಕ್ಕು ಹುಣ್ಣಾದರು. ಹಲವು ಹೆಂಗಳೆಯರು ಕದ್ದು ಮುಚ್ಚಿ ಕಿರುಗಣ್ಣಿನಲ್ಲಿ ಕುಣಿತ ವೀಕ್ಷಿಸಿದರು.
ಊರಲೆಲ್ಲಾ ಸಾಗಿದ ಕುಣಿತ ಅಂತಿಮವಾಗಿ ಲಕ್ಷ್ಮೀನರಸಿಂಹಸ್ವಾಮಿ ಗುಡಿಯ ಬಳಿ ಸಾಗಿತು. ಇಲ್ಲಿ ದೇವರಿಗೆ ವಿವಿಧ ಜನಾಂಗದವರ ಗುಪ್ತಾಂಗವನ್ನು ವರ್ಣಿಸುವ ಮೂಲಕ ಬೈದು, ರಮಿಸುವ `ಡುಮ್ಮಿ ಸಾಲಿರೆನ್ನಿರಿ' ಎಂಬ ಹಾಡು ಹಾಡಿದರು.
ಗುಡ್ಡಧಾರಿಗಳಾದ ಅಪ್ಪಾಜಿಗೌಡ, ರಾಮೇಗೌಡ, ದೇವರಾಜೇಗೌಡ, ಮಂಜು ಇತರರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.