ಪಾಂಡವಪುರ: ತಾಲ್ಲೂಕಿನ ಮೇಲುಕೋಟೆಯಲ್ಲಿ ಶ್ರೀ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಕಲ್ಯಾಣಿ ಯಲ್ಲಿ ಶುಕ್ರವಾರ ಅಪಾರ ಭಕ್ತರು ತೀರ್ಥಸ್ನಾನ ಮಾಡಿ ಪುಳಕಿತರಾದರು.
ಬೆಳಿಗ್ಗೆ ಚಲುವನಾರಾಯಣಸ್ವಾಮಿಗೆ ಸಂಧಾನಸೇವೆ ಹಾಗೂ ಚೂರ್ಣಾಭಿಷೇಕ ನಡೆಯಿತು. ಮಧ್ಯಾಹ್ನ ದೇವಸ್ಥಾನದಿಂದ ಹೊರಟ ದೇವರ ಉತ್ಸವವು ಕಲ್ಯಾಣಿ ಕೊಳ ತಲುಪಿದ ಮೇಲೆ ದೇವರಿಗೆ ಪೂಜೆ ಸಲ್ಲಿಸಲಾಯಿತು. ನಂತರ ಚಲುವನಾರಾಯಣಸ್ವಾಮಿಯ ಬೆಳ್ಳಿಯ ಮೂರ್ತಿಗೆ ಆಭಿಷೇಕ ಮಾಡಿಸಿದ ಅರ್ಚಕರು ಕಲ್ಯಾಣಿ ಕೊಳದಲ್ಲಿ ತೀರ್ಥಸ್ನಾನ ಮಾಡಿಸಿದರು. ಕೊಳದ ಸುತ್ತ ಸೇರಿದ್ದ ಅಸಂಖ್ಯಾತ ಭಕ್ತರು ಕೊಳದಲ್ಲಿ ಮುಳುಗಿ ತೀರ್ಥಸ್ನಾನ ಮಾಡಿದರೆ, ಮತ್ತೆ ಕೆಲ ಭಕ್ತರು ಕೊಳದ ನೀರನ್ನು ತಮ್ಮ ಮೇಲೆ ಚಿಮುಕಿಸಿಕೊಂಡು ಪಾವನರಾದರು.
ಭಕ್ತರು ತೀರ್ಥ ಸ್ನಾನ ಮಾಡುತ್ತಿದ್ದಂತೆ, ಮಳೆ ಹನಿಗಳು ಬೀಳತೊಡಗಿದವು. ಇದು ದೇವರ ಕೃಪೆ ಎಂದು ಭಕ್ತರು ಭಾವಿಸಿದರು. ತೀರ್ಥಸ್ನಾನಕ್ಕೂ ಮುನ್ನ ಕಾಕತಾಳೀಯವೆಂಬಂತೆ ಗರುಡ ಪಕ್ಷಿಯೊಂದು ಕಲ್ಯಾಣಿ ಕೊಳದ ಮೇಲೆ ಹಾರಾಡಿದಾಗ ಭಕ್ತರು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ವ್ಯಕ್ತಪಡಿಸಿದರು.
ಕಲ್ಯಾಣಿ ಕೊಳದ ಸುತ್ತಮುತ್ತ ದಾಸಯ್ಯರು ಬೊನಾಸಿ ಹಿಡಿದು ಜಾಗಟೆ ಬಡಿದು `ಭಕ್ತರ ಮನೆಯ ಉದ್ಧಾರ ಮಾಡೋ ಗೋವಿಂದೋ~ ಎಂದು ಹೇಳಿ ಶಂಖವನ್ನು ಊದಿದರು. ಭಕ್ತರು ದಾಸಯ್ಯನವರ ಪಾದಕ್ಕೆ ನಮಸ್ಕರಿಸಿದರು.
ಅನ್ನ ಸಂತರ್ಪಣೆ: ತೀರ್ಥಸ್ನಾನದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಅಂಬೇಡ್ಕರ್ ವಿಚಾರ ವೇದಿಕೆ ವತಿಯಿಂದ ಶ್ರೀ ರಾಮಾನುಜ ಸಾರ್ವಜನಿಕ ನಿಲಯದಲ್ಲಿ ಹಾಗೂ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಅನ್ನ ಸಂತರ್ಪಣೆ ನಡೆಯಿತು.
ರಾತ್ರಿ ಚಲುವನಾರಾಯಣಸ್ವಾಮಿ ದೇವರಿಗೆ ಪಟ್ಟಾಭಿಷೇಕ, ಪುಷ್ಪ ಮಂಟಪಾರೋಹಣ ಪಡಿಮಾಲೆ, ಪೂರ್ಣಾಹುತಿ, ಕುಂಭಾಭಿಷೇಕ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.