ಮಂಡ್ಯ: ಲೋಕಸಭೆ ಮತದಾನದ ನಂತರ ಕ್ಷೇತ್ರದಾದ್ಯಂತ ಆರಂಭವಾಗಿರುವ ಬೆಟ್ಟಿಂಗ್ ದಂಧೆ ತಡೆಯಲು ಪೊಲೀಸರು ಮುಂದಾಗಿದ್ದಾರೆ. ಜಿಲ್ಲಾ ಅಪರಾಧ ವಿಭಾಗದ (ಡಿಸಿಬಿ) ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಐವರು ಪೊಲೀಸರ ತಂಡ ರಚಿಸಿದೆ.
ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಕ್ಷೇತ್ರದ ಹಳ್ಳಿಹಳ್ಳಿಗಳಲ್ಲಿ ಜನರು ಸೋಲು– ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಕೆಲವರು ಹಣ, ಹಸು, ಎಮ್ಮೆ, ಆಡು, ಕುರಿ, ಕೋಳಿಯನ್ನು ಪಣಕ್ಕಿಟ್ಟಿದ್ದಾರೆ. ಮತದಾನ ಮುಗಿಯುತ್ತಿದ್ದಂತೆ ಹಲವು ಆಂತರಿಕ ಸಮೀಕ್ಷೆಗಳು ಜನರ ಕುತೂಹಲ ಕೆರಳಿಸಿವೆ. ಜೆಡಿಎಸ್ ಪಕ್ಷ ತನ್ನದೇ ಸಮೀಕ್ಷೆ ಬಿಡುಗಡೆ ಮಾಡಿದ್ದು ನಿಖಿಲ್ ಗೆಲುವಿಗೆ ಕಾರಣವಾದ ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ಅದರಂತೆ ಪಕ್ಷೇತರ ಅಭ್ಯರ್ಥಿ ಸುಮಲತಾ ಬೆಂಬಲಿಗರೂ ತಮ್ಮದೇ ಸಮೀಕ್ಷೆ ಬಿಡುಗಡೆ ಮಾಡಿದ್ದಾರೆ. ಅವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಬೆಟ್ಟಿಂಗ್ ಹಾವಳಿಗೆ ಕಾರಣವಾಗಿವೆ.
ಮೇ 23ರ ವರೆಗೂ ಕ್ಷೇತ್ರದಲ್ಲಿ ಬೆಟ್ಟಿಂಗ್ನಿಂದ ಉಂಟಾಗಬಹುದಾದ ಅಪಾಯ ತಪ್ಪಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಬೆಟ್ಟಿಂಗ್ ಮೇಲೆ ವಿಶೇಷ ನಿಗಾ ವಹಿಸುವಂತೆ ಡಿಸಿಬಿ ತಂಡ ಕ್ಷೇತ್ರದ ಎಲ್ಲಾ ಪೊಲೀಸ್ ಠಾಣೆಗಳ ಸಬ್ಇನ್ಸ್ಪೆಕ್ಟರ್ಗಳಿಗೆ ಸೂಚನೆ ನೀಡಿದೆ.
‘ಜನರು ವೈಯಕ್ತಿಕವಾಗಿ ಬೆಟ್ಟಿಂಗ್ ಕಟ್ಟಿದರೆ ಅದನ್ನು ತಡೆಯುವುದು ಕಷ್ಟ. ಆದರೆ ಒಬ್ಬರ ನೇತೃತ್ವದಲ್ಲಿ ಸಂಘಟನಾತ್ಮಕವಾಗಿ ದಂಧೆ ನಡೆಸಿದರೆ ಅದನ್ನು ತಡೆಯುತ್ತೇವೆ. ಆರೋಪಿಗಳನ್ನು ತಕ್ಷಣ ಬಂಧಿಸುತ್ತೇವೆ. ಜಿಲ್ಲೆಯ ಎಲ್ಲಾ ಠಾಣೆಗಳ ಸಿಬ್ಬಂದಿ ಅದಕ್ಕಾಗಿ ಸಜ್ಜಾಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.