ADVERTISEMENT

ಮೇಲುಕೋಟೆ ಕ್ಷೇತ್ರ: ಬಹುತೇಕ ಶಾಂತಿಯುತ

ಲಘು ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 13 ಮೇ 2018, 9:47 IST
Last Updated 13 ಮೇ 2018, 9:47 IST

ಪಾಂಡವಪುರ: ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಮತಗಟ್ಟೆ ಕೇಂದ್ರಗಳಲ್ಲಿ ಮತ‌ದಾರರು ಉತ್ಸುಕತೆಯಿಂದ ಮತಚಲಾಯಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಚಿನಕುರಳಿ ಗ್ರಾಮದಲ್ಲಿ, ಸ್ವರಾಜ್ ಇಂಡಿಯಾ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಕ್ಯಾತನಹಳ್ಳಿ ಗ್ರಾಮದಲ್ಲಿ ಮತ ಚಲಾಯಿಸಿದರು. ಸಮಾಜಸೇವಕ ಬಿ.ರೇವಣ್ಣ ಲಕ್ಷ್ಮೀಸಾಗರ ಗ್ರಾಮದಲ್ಲಿ ಮತ ಚಲಾಯಿಸಿದರು.

ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರು ತಮ್ಮ ತಂದೆ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಮತಗಟ್ಟೆಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ADVERTISEMENT

ಪಟ್ಟಣದ ಹಾರೋಹಳ್ಳಿ ಮತ್ತು ತಾಲ್ಲೂಕಿನ ಚಿನಕುರಳಿ ಗ್ರಾಮದಲ್ಲಿ ಜೆಡಿಎಸ್ ಮತ್ತು ರೈತ ಸಂಘ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿ ನಡೆದು ಪ್ರಕ್ಷುಬ್ಧ ವಾತಾವರಣ ಉಂಟಾದಾಗ ಪೊಲೀಸರು 2 ಗುಂಪನ್ನು ಚದರಿಸಲು ಲಘು ಲಾಠಿ ಪ್ರಹಾರ ಮಾಡಿದರು.

ಹೃದಯಾಘಾತದಿಂದ ಸಾವು: ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ತಿಮ್ಮೇಗೌಡ (65) ಅವರು ಮತದಾನ ಮಾಡಿ ಮನೆಗೆ ಬಂದ ಬಳಿಕ ಹೃದಯಘಾತವಾಗಿ ಸ್ಥಳದಲ್ಲೆ ಮೃತಪಟ್ಟರು. ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮತಗಟ್ಟೆ ಕೇಂದ್ರಗಳಲ್ಲಿ ಯುವಕ, ಯುವತಿ, ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಹೊಸ ಮತದಾರರು ಉತ್ಸಕತೆಯಿಂದ ಪಾಲ್ಗೊಂಡರು.

ರಾಜಕೀಯ ಪಕ್ಷಗಳ ಕಾರ್ಯಕರ್ತರು ಬಿಸಿಲನ್ನು ಲೆಕ್ಕಿಸದೆ ಮತಗಟ್ಟೆ ಕೇಂದ್ರದ ಬಳಿ ನಿಂತು ತಮ್ಮ ಅಭ್ಯರ್ಥಿ ಪರ ಅಲ್ಲಲ್ಲಿ ಮತ ಯಾಚಿಸುತ್ತಿದ್ದು ಕಂಡು ಬಂತು. ಬಿಸಿಲಿಗೆ ಬಳಲಿದ ಕಾರ್ಯಕರ್ತರು ನೀರು, ಮಜ್ಜಿಗೆ, ತಂಪು ಪಾನೀಯಗಳಿಗೆ ಮೊರೆ ಹೋದದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.