ADVERTISEMENT

ವಿದ್ಯುತ್‌ ಕಡಿತ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 6:34 IST
Last Updated 24 ಮಾರ್ಚ್ 2014, 6:34 IST

ಭಾರತೀನಗರ: ಅಸಮರ್ಪಕ  ವಿದ್ಯುತ್ ಪೂರೈಕೆ ಖಂಡಿಸಿ ಇಲ್ಲಿಗೆ ಸಮೀಪದ ಅಣ್ಣೂರು ಗ್ರಾಮಸ್ಥರು ಸೆಸ್ಕ್‌  ಕಚೇರಿಗೆ ಮುತ್ತಿಗೆ ಹಾಕಿ ಭಾನುವಾರ ಪ್ರತಿಭಟಿಸಿದರು. ಸಮರ್ಪಕ ವಿದ್ಯುತ್ ಪೂರೈಕೆಮಾಡಲು ಅಗತ್ಯಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಳೆದ ಒಂದು ವಾರದಿಂದ ವಿದ್ಯುತ್ ಪೂರೈಕೆ ಸಮರ್ಪಕವಿಲ್ಲದೆ ಕುಡಿಯಲು ಜನರಿಗೆ ನೀರೂ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಓದಲು ತೊಂದರೆಯಾಗಿದೆ.  ಮಾರಮ್ಮ ಹಬ್ಬ ನಡೆಯುತ್ತಿದೆ. ಆದ್ದರಿಂದ ಕೂಡಲೇ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದರು.

ಅಣ್ಣೂರು ಗ್ರಾ.ಪಂ ವತಿಯಿಂದ ವಿದ್ಯುತ್ ಪ್ರಸರಣಾ ಕೇಂದ್ರ ಸ್ಥಾಪನೆ ಮಾಡಲು ಲೈಸನ್ಸ್ ನೀಡುವ ಸಂದರ್ಭದಲ್ಲಿ ಅಣ್ಣೂರು ಗ್ರಾಮಕ್ಕೆ ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದರೂ ಅದು ಚಾಲ್ತಿಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕಾರ್ಯಪಾಲಕ ಎಂಜಿನಿಯರ್‌ ರಾಮಲಿಂಗಯ್ಯ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ನಂತರ  ರಾಮಲಿಂಗಯ್ಯ ಉದ್ರಿಕ್ತರನ್ನು ಸಮಾಧಾನ ಗೊಳಿಸಿ ಕೆ.ಎಂ. ದೊಡ್ಡಿ ಎಫ್ 1 ಲೇನ್‌ನಿಂದ ವಿದ್ಯುತ್ ನೀಡುವುದಾಗಿ ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಮುಖಂಡರಾದ ಕೃಷ್ಣಪ್ಪ, ಎ.ಎಸ್. ರಾಜೀವ್, ಜಿ.ಎಸ್. ಸಿದ್ದೇಗೌಡ,  ಎ.ಟಿ. ಶಿವಲಿಂಗೇಗೌಡ, ಸಿದ್ದಪ್ಪ, ರಮೇಶ್, ದೇವರಾಜು, ಜಯರಾಮು, ಶೇಖರ್, ಸಿದ್ದರಾಮು, ಬೋರೇಗೌಡ ರಾಮಕೃಷ್ಣ, ವರದರಾಜು ಭಾಗವಹಿಸಿದ್ದರು.

ಪರೀಕ್ಷೆ: ವಿದ್ಯಾರ್ಥಿಗಳಿಗೆ ತೊಂದರೆ
ಶ್ರೀರಂಗಪಟ್ಟಣ: ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ಅನಿಯಮಿತ ವಿದ್ಯುತ್‌ ಕಡಿತ ಮಾಡಲಾಗುತ್ತಿದ್ದು, ಕುಡಿಯುವ ನೀರು ಸರಬರಾಜು ಹಾಗೂ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಇಲ್ಲಿನ ಸೆಸ್ಕ್‌ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಸುಮಾರು ಅರ್ಧತಾಸು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಾಗೂ ಸೆಸ್ಕ್‌ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ವಿದ್ಯಾರ್ಥಿಗಳ ಪರೀಕ್ಷೆಗಳು ಆರಂಭವಾಗಿವೆ. ಅನಿಯಮಿತವಾಗಿ ವಿದ್ಯುತ್‌ ಕಡಿತ ಮಾಡುತ್ತಿರುವುದರಿಂದ  ಓದಿಗೆ ತೊಂದರೆಯಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಇದರಿಂದ ಕುಡಿಯುವ ನೀರು ಸರಬರಾಜಿಗೂ ತೊಂದರೆ ಆಗಿದೆ ಎಂದು ಕರವೇ ತಾಲ್ಲೂಕು ಅಧ್ಯಕ್ಷ ಕೆ.ಬಿ. ಬಸವರಾಜು ದೂರಿದರು.

ವಿದ್ಯುತ್‌ ಕಡಿತದಿಂದ ಪಟ್ಟಣದಲ್ಲಿ ವ್ಯಾಪಾರ, ವಹಿವಾಟಿಗೆ ತೊಂದರೆ ಆಗಿದ್ದು, ವ್ಯಾಪಾರಸ್ಥರು ಬವಣೆ ಪಡುತ್ತಿದ್ದಾರೆ. ಸೆಸ್ಕ್‌ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ ಮನಸೋ ಇಚ್ಛೆ ವಿದ್ಯುತ್‌ ಕಡಿತ ಮಾಡುತ್ತಿದ್ದಾರೆ. ಪರೀಕ್ಷೆ ಹಾಗೂ ಕುಡಿಯುವ ನೀರು ಸರಬರಾಜು ಉದ್ದೇಶದಿಂದ ವಿದ್ಯುತ್‌ ಕಡಿತ ಮಾಡಬಾರದು. ಕಡಿತ ಮಾಡುವುದು ಅನಿವಾರ್ಯ ಆದರೆ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಆಗ್ರಹಿಸಿ ಸೆಸ್ಕ್‌ ಎಇಇಗೆ ಮನವಿ ಸಲ್ಲಿಸಿದರು. ಗಂಜಾಂ ಯೋಗಣ್ಣ, ಪುಟ್ಟರಾಮು, ಪುರಸಭೆ ಮಾಜಿ ಸದಸ್ಯ ನಾರಾಯಣಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಲ್ಲೂಕಿನ ಅರಕೆರೆ ಹೋಬಳಿಯಲ್ಲಿ ಹೊತ್ತು ಗೊತ್ತಿಲ್ಲದೆ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ದಿನಕ್ಕೆ 3–4 ಗಂಟೆ ಮಾತ್ರ ವಿದ್ಯುತ್‌ ಇರುತ್ತದೆ. ಗ್ರಾಮಗಳು ಕತ್ತಲಲ್ಲಿ ಇವೆ. ರಾತ್ರಿ ವೇಳೆ ಕಳವು ಪ್ರಕರಣಗಳು ನಡೆಯುತ್ತಿವೆ. ಕೃಷಿ ಪಂಪ್‌ಸೆಟ್‌ ಹೊಂದಿರುವ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ದೂರು ನೀಡಲು ಸೆಸ್ಕ್‌ ಅಧಿಕಾರಿಗಳು ಸಂಪರ್ಕಕ್ಕೇ ಸಿಗುತ್ತಿಲ್ಲ ಎಂದು ಕೊಡಿಯಾಲ ತಾ.ಪಂ. ಕ್ಷೇತ್ರದ ಸದಸ್ಯ ಟಿ.ಬಿ. ಕೆಂಪೇಗೌಡ, ಆಲಗೂಡು ಗ್ರಾ.ಪಂ. ಸದಸ್ಯ ಸಿದ್ದೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.