ADVERTISEMENT

ಸಂಭ್ರಮದ ರಾಮಾನುಜಾಚಾರ್ಯರ ಪುನರ್ವಸು ಉತ್ಸವ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 7:10 IST
Last Updated 7 ಫೆಬ್ರುವರಿ 2012, 7:10 IST

ಪಾಂಡವಪುರ: ತಾಲ್ಲೂಕಿನ ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿ ರಾಮಾನುಜಾಚಾರ್ಯರ ಪುನರ್ವಸು ಮಹೋತ್ಸವ ಸೋಮವಾರ ಸಂಭ್ರಮದಿಂದ ನಡೆಯಿತು.

ಮುಂಜಾನೆ 4 ಗಂಟೆ ಕಲ್ಯಾಣಿ ಉತ್ಸವದೊಂದಿಗೆ ಪ್ರಾರಂಭವಾಗಿ ಕಲ್ಯಾಣಿಯ ಗಜೇಂದ್ರ ವರದನ ಸನ್ನಿಧಿಯ ಬಳಿ ನಿತ್ಯಾರಾಧನೆ ನೆರವೇರಿತು. ಬಳಿಕ ರಾಮಾನುಜಾಚಾರ್ಯರ ಭವ್ಯ ಉತ್ಸವ ಜರುಗಿತು.

ವಂಗೀಪುರಂ ಮಠದ ರಾಮಾನುಜಾಚಾರ್ಯರ ಅರ್ಚಕ ಕುಟುಂಬದ ವತಿಯಿಂದ ದೇವಾಲಯದ ಮುಂದೆ ಫಲಪುಷ್ಪವನ್ನು ಪ್ರದರ್ಶಿಸಲಾಯಿತು. ನಂತರ ಮಹಾಮಂಗಳಾರತಿ ನಡೆದು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ರಾಮಾನುಜರ ಸನ್ನಿಧಿಯ ವಂಗೀಪುರಂ ತಿರುಮಾಳಿಗೆಯಿಂದ 300ಕ್ಕೂ ಹೆಚ್ಚು ತಟ್ಟೆಗಳಲ್ಲಿ ವೈವಿಧ್ಯಮಯ ಫಲಪುಷ್ಪಗಳನ್ನು ಇಟ್ಟು ಆರಾಧ್ಯ ದೈವ ತಿರುನಾರಾಯಣನಿಗೆ ಸಮರ್ಪಿಸಲಾಯಿತು.

11ನೇ ಶತಮಾನದಲ್ಲಿ ರಾಮಾನುಜಾಚಾರ್ಯರು ಮೇಲುಕೋಟೆಯನ್ನು ಜೀರ್ಣೋದ್ಧಾರ ಮಾಡಿದ್ದರು. ಕಲ್ಯಾಣಿಯಿಂದ ತೀರ್ಥ ತಂದು ಹುತ್ತದ ಮೇಲೆ ಸುರಿದು ಅದರಲ್ಲಿ ಹೂತಿದ್ದ ನಾರಾಯಣಸ್ವಾಮಿಯ ಮೂರ್ತಿಯನ್ನು ಹೊರತೆಗೆದರು ಎಂಬ ಐತಿಹ್ಯವಿದೆ. ಇದರ ಪ್ರತೀಕವಾಗಿ ರಾಮಾನುಜಾಚಾರ್ಯರ ಪುನರ್ವಸು ಮಹೋತ್ಸವ ಪ್ರತಿವರ್ಷ ಜರುಗುತ್ತದೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೇಣುಗೋಪಾಲ್, ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಆನಂದಾಳ್ವಾರ್, ಇಳೈ ಆಳ್ವಾರ್ ಸ್ವಾಮೀಜಿ ಹಾಗೂ ಇತರರು ಫಲಪುಷ್ಪಗಳ ತಟ್ಟೆಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.