ನಾಗಮಂಗಲ: ‘ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಕೌಶಲ ಮತ್ತು ಬುದ್ಧಿಶಕ್ತಿ ಹೊಂದಿದ್ದು ಅದನ್ನು ಬಳಸಿಕೊಳ್ಳಲು ವಿಫಲನಾಗುತ್ತಿದ್ದಾನೆ’ ಎಂದು ಕೇಂದ್ರದ ಪ್ರಧಾನ ಔಷಧ ನಿಯಂತ್ರಕ ಡಾ.ಈಶ್ವರ ರೆಡ್ಡಿ ಹೇಳಿದರು.
ತಾಲ್ಲೂಕಿನ ಬಿ.ಜಿ. ನಗರದಲ್ಲಿ ಆದಿಚುಂಚನಗಿರಿ ಫಾರ್ಮಸಿ ಕಾಲೇಜು ಏರ್ಪಡಿಸಿದ್ದ ದೀಕ್ಷಾ– ಮೈತ್ರಿ ಪದವೀಧರರ ದಿನ ಮತ್ತು ಹಳೇ ವಿದ್ಯಾರ್ಥಿಗಳ ಸಂಘ– 2018 ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
‘ಔಷಧಿ ವಿತರಣೆ ಕ್ಷೇತ್ರದಲ್ಲಿ ಉತ್ತಮವಾದ ಭವಿಷ್ಯವಿದೆ. ಕ್ಷೇತ್ರದಲ್ಲಿ ಬಹಳ ಗಂಭೀರವಾಗಿ ತೊಡಗಿಸಿಕೊಳ್ಳಬೇಕು. ಫಾರ್ಮಸಿ ಜಗತ್ತಿನಲ್ಲಿ ಎದುರಾಗುವ ಯಾವುದೇ ತರನಾದ ತೊಂದರೆಗಳನ್ನು ಎದುರಿಸಲು ಸಜ್ಜಾಗಬೇಕು. ನಿಮ್ಮಲ್ಲಿರುವ ಬುದ್ಧಿಶಕ್ತಿ, ಶ್ರಮವನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಬೇಕು. ಅದು ಭವಿಷ್ಯವನ್ನು ಉಜ್ವಲಗೊಳಿಸುತ್ತದೆ. ಪ್ರತಿಯೊಂದು ರಂಗದಲ್ಲೂ ಸವಾಲುಗಳು ಇರುತ್ತವೆ ಅವುಗಳನ್ನು ಬದ್ಧತೆಯಿಂದ ಎದುರಿಸಬೇಕು. ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ’ ಎಂದು ಹೇಳಿದರು.
ಡಾ.ಚಂದ್ರಶೇಖರ್ ಶೆಟ್ಟಿ ಮಾತನಾಡಿ ‘ಯುವಜನರು ವೃತ್ತಿ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡಾಕ್ಷಣ ಜೀವನ ಮುಗಿದುಹೋಗುವುದಿಲ್ಲ. ಕಲ್ಪನಾಲೋಕದಲ್ಲಿ ವಿಹರಿಸುವುದನ್ನು ಬಿಟ್ಟು, ಸಮಾಜಕ್ಕೆ ನೀವು ನೀಡಬಹುದಾದ ಕೊಡುಗೆಯ ಬಗ್ಗೆ ಆಲೋಚನೆ ಮಾಡಬೇಕು’ ಎಂದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಬಿ.ಎಲ್ ವಿನಯ್, ಎಂ.ವಿ.ಎನ್. ಕಶ್ಯಪ್ ಮಾತನಾಡಿದರು. ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ಶಿವರಾಮು, ಡಾ.ರಮೇಶ್, ಡಾ.ಎಂ.ಕೆ. ಸೂರ್ಯಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.