ಮದ್ದೂರು: ದೊರಕಿರುವ ಅಲ್ಪ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವುದಾಗಿ ಸಂಸದೆ ರಮ್ಯಾ ಭರವಸೆ ನೀಡಿದರು.
ಪಟ್ಟಣಕ್ಕೆ ಸಮೀಪದ ಶಿವಪುರಕ್ಕೆ ಭಾನುವಾರ ಭೇಟಿ ಮಾಡಿದ ಅವರು, ಸಾರ್ವಜನಿಕರನ್ನುದ್ಧೇಶಿಸಿ ಮಾತನಾಡಿದರು. ಉತ್ತಮ ಮನಸ್ಸಿನಿಂದ ನೀವು ನನಗೆ ಮತನೀಡಿ ಗೆಲ್ಲಿಸಿದ್ದೀರಿ. ನಿಮ್ಮ ಆಶೋತ್ತರಗಳಿಗನುಗುಣವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನಗೆ ದೊರಕುವ ಎಲ್ಲಾ ಅನುದಾನವನ್ನು ಆದ್ಯತೆ ಮೇರೆಗೆ ಬಿಡುಗಡೆಗೊಳಿಸು ವುದಾಗಿ ಅವರು ತಿಳಿಸಿದರು.
ತಾಲ್ಲೂಕಿನ ಸೂಳಕೆರೆ ಹೂಳುತ್ತುವ ಕಾರ್ಯದ ವಿಚಾರದಲ್ಲಿ ನಾನು ಕ್ಷೇತ್ರದ ಶಾಸಕರನ್ನು ಕಡೆಗಣಿಸುವ ಮಾತುಗಳನ್ನು ಆಡಿಲ್ಲ. ಈ ವಿಚಾರದಲ್ಲಿ ಹರಡಿರುವ ವದಂತಿಗಳಿಗೆ ಕಿವಿಗೊಡಬೇಕಾದ ಅಗತ್ಯವಿಲ್ಲ. ನನ್ನ ಅನುದಾನದಲ್ಲಿಯೇ ಕ್ಷೇತ್ರ ಶಾಸಕರ ಮಾರ್ಗದರ್ಶನದಲ್ಲಿ ಈ ಕಾರ್ಯ ಪೂರ್ಣಗೊಳಿಸುವೆ ಎಂದರು.
ಅಹವಾಲು ಸ್ವೀಕಾರ: ಬಳಿಕ ಅಲ್ಲಿಂದ ಸಂಸದೆ ರಮ್ಯಾ ಅವರು ಸೋಮನಹಳ್ಳಿ, ಚಾಮನಹಳ್ಳಿ, ಹೊಸಕೆರೆ, ನಿಲುವಾಗಿಲು, ಗಜ್ಜಲಗೆರೆ, ವಳೆಗೆರೆಹಳ್ಳಿ, ಬೆಸಗರಹಳ್ಳಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಜನರನ್ನು ಭೇಟಿ ಮಾಡಿ ಅವರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಕೆಪಿಸಿಸಿ ಸದಸ್ಯ ಗುರುಚರಣ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಮಾಜಿ ಶಾಸಕರಾದ ಕಲ್ಪನಾ ಸಿದ್ದರಾಜು, ಮಧು ಜಿ.ಮಾದೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಸವಿತಾ ಮಧುಸೂದನ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿಚನ್ನರಾಜು, ಸದಸ್ಯರಾದ ಕೆ.ಆರ್.ಮಹೇಶ್, ಗಂಗಾಬಲರಾಂ, ಪಿ.ಸಂದರ್ಶ, ಸುನಂದ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.