ಮಂಡ್ಯ: ಅಕ್ಷರ ಜಾತ್ರೆಯಾದ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.15 ಮತ್ತು 16 ರಂದು ನಗರದ ಒಳಾಂಗಣ ಕ್ರೀಡಾಂಗಣ ಆವರಣ ಎಚ್್.ಎಲ್್. ನಾಗೇಗೌಡ ವೇದಿಕೆ ಹಾಗೂ 3 ಸಮನಾಂತರ ವೇದಿಕೆಗಳಲ್ಲಿ ನಡೆಯಲಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಡೆಯಲಿರುವ ಸಮ್ಮೇಳನದ ಧ್ವಜಾರೋಹಣವು ಫೆ.15 ರಂದು ಬೆಳಿಗ್ಗೆ 7 ಗಂಟೆಗೆ ನಡೆಯಲಿದೆ. ವಿಶ್ವೇಶ್ವರಯ್ಯ ಪ್ರತಿಮೆಯಿಂದ ಬೆಳಿಗ್ಗೆ 9 ಗಂಟೆಗೆ ಸಮ್ಮೇಳಾನಧ್ಯಕ್ಷ ಪ್ರೊ. ಕೆ. ಭೈರವಮೂರ್ತಿ ಅವರ ಮೆರವಣಿಗೆ ಹೊರಡಲಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಎಚ್.ಎಲ್. ನಾಗೇಗೌಡರ ವೇದಿಕೆಯಲ್ಲಿ ನಡೆಯುವ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಉದ್ಘಾಟಿಸಲಿದ್ದು, ಸ್ಮರಣ ಸಂಚಿಕೆಯನ್ನು ಸಂಸದೆ ರಮ್ಯಾ ಬಿಡುಗಡೆ ಮಾಡಲಿ ದ್ದಾರೆ. ಪುಸ್ತಕ ಮಳಿಗೆಗಳನ್ನು ಜಿ.ಪಂ. ಅಧ್ಯಕ್ಷೆ ಭಾರತಿ ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಚ್.ಎಲ್. ಕೇಶವಮೂರ್ತಿ ಮಾತನಾಡ ಲಿದ್ದು, ಅವರನ್ನು ಕಸಾಪ ಕೇಂದ್ರ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಸನ್ಮಾನಿಸಲಿದ್ದಾರೆ. ಶಾಸಕ ಎನ್. ಚಲುವರಾಯಸ್ವಾಮಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ನಂತರ ಸಮ್ಮೇಳಾನಧ್ಯಕ್ಷರು ಭಾಷಣ ಮಾಡಲಿದ್ದಾರೆ ಎಂದರು.
ಮುಖ್ಯ ವೇದಿಕೆಯಯ ಮಧ್ಯಾಹ್ನ 2ಕ್ಕೆ ಮೊದಲ ಗೋಷ್ಠಿ ಕನ್ನಡ ಸಾಹಿತ್ಯ ಮತ್ತು ಜೀವನಮೌಲ್ಯಗಳು ಕುರಿತು, 4 ಗಂಟೆಗೆ ಎರಡನೇ ಗೋಷ್ಠಿ ನೇಗಿಲ ಯೋಗಿ, ಸಂಜೆ 6ಕ್ಕೆ ಮೂರನೇ ಗೋಷ್ಠಿ ರಂಗಭೂಮಿ ಕುರಿತು ನಡೆಯಲಿವೆ. ಆ ನಂತರ ಚೋರ ಚರಣದಾಸ ನಗೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ಸಮನಾಂತರ ವೇದಿಕೆಯಾದ ಕಲಾ ಮಂದಿರದ ಎಂ.ಎಲ್್ ಶ್ರೀಕಂಠೇಗೌಡ ವೇದಿಕೆಯಲ್ಲಿ ಮಧ್ಯಾಹ್ನ 12.30ಕ್ಕೆ ಯುವ ಮುನ್ನೋಟ, ಮಧ್ಯಾಹ್ನ 2ಕ್ಕೆ ಹಾಸ್ಯ ವಿಶೇಷ ಕುರಿತು ಸಂಜೆ 4 ಗಂಟೆಗೆ ಪೌರಾಣಿಕ ನಾಟಕ ಶ್ರೀಕೃಷ್ಣ ಸಂಧಾನ ಪ್ರದರ್ಶನವಾಗಲಿದೆ. ಗಾಂಧಿಭವನದ ತ್ರಿವೇಣಿ ವೇದಿಕೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಮಕ್ಕಳ ಗೋಷ್ಠಿ ನಡೆಯಲಿದೆ.
ಫೆ.16 ರಂದು ಮುಖ್ಯ ವೇದಿಕೆಯಲ್ಲಿ ಉದ್ಯಮ ಕ್ಷೇತ್ರದಲ್ಲಿ ಕಾರ್ಯಕ್ಷಮತೆ, ಕರ್ತವ್ಯಬದ್ಧತೆ, ಯುವಕರಲ್ಲಿ ಹೆಚ್ಚೋ, ಯುವತಿಯರಲ್ಲಿ ಹೆಚ್ಚೋ? ಕುರಿತು ಚರ್ಚಾ ಸ್ಪರ್ಧೆ ನಡೆಯಲಿದೆ. 10ಕ್ಕೆ ಅಭಿವೃದ್ಧಿ ಮಂಡ್ಯ ಕುರಿತು, 11.30ಕ್ಕೆ ನಮ್ಮ ಅಮ್ಮ ಹೆಸರಿನಲ್ಲಿ ಮಾತು,ಕಥೆ, ಗೀತೆ, ಕಾವ್ಯ ನಾಟ್ಯ, ಕುಂಚ ಕಾರ್ಯಕ್ರಮವಿದೆ. ಸಂಜೆ 4.30ಕ್ಕೆ ಸಮ್ಮೇಳಾನಧ್ಯಕ್ಷರೊಂದಿಗೆ ಸಂವಾದ ನಡೆಯಲಿದೆ.
ಕಲಾ ಮಂದಿರದ ಎಂ.ಎಲ್. ಶ್ರೀಕಂಠೇಶಗೌಡ ವೇದಿಕೆಯಲ್ಲಿ ಬೆಳಿಗ್ಗೆ 9.30 ಕವಿ ಸಂಭ್ರಮ, 11.30ಕ್ಕೆ ಕವಿಗೋಷ್ಠಿ ನಡೆಯಲಿದೆ. ಮುಖ್ಯ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು. ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ತ್ರಿವೇಣಿ ವೇದಿಕೆಯಲ್ಲಿ ಚದುರಂಗ ಆಡಿ: ಚತುರರಾಗಿ, 12ಕ್ಕೆ ಮಕ್ಕಳ ಕವಿಗೋಷ್ಠಿ, 2ಕ್ಕೆ ಮಕ್ಕಳ ವಿಚಾರಗೋಷ್ಠಿ 3ಕ್ಕೆ ಮಕ್ಕಳ ಚುಟುಕು ಗೋಷ್ಠಿ ನಡೆಯಲಿದೆ.
ಸಂಜೆ 5 ಗಂಟೆಗೆ ಮುಖ್ಯ ವೇದಿಕೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್್ ಕೇಂದ್ರ ಘಟಕದ ಅಧ್ಯಕ್ಷ ಪುಂಡಲೀಕ ಹಾಲಂಬಿ ಭಾಷಣ ಮಾಡಲಿದ್ದಾರೆ. ಪ್ರೊ.ಕೆ. ಭೈರವಮೂರ್ತಿ, ಸಾಹಿತಿ ಡಾ.ಸಿ.ಪಿ.ಕೆ ಸನ್ಮಾನಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಿಕಟಪೂರ್ವ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕಸಾಪ ಪದಾಧಿಕಾರಿಗಳಾದ ಹಾರೋಹಳ್ಳಿ ಪುಟ್ಟಸ್ವಾಮಿ, ದೇವರಾಜು, ರವಿಕುಮಾರ ಚಾಮಲಾಪುರ, ಕೃಷ್ಣೇಗೌಡ ಹುಸ್ಕೂರು, ಮಂಜುಳಾ ಉದಯಶಂಕರ್, ಕೆ. ಶಂಭು ಕಬ್ಬನಹಳ್ಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.