ಕೆ.ಆರ್.ಪೇಟೆ: ಮದ್ಯ ಸೇವನೆ ಮಾಡಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಭಾನುವಾರ ತಾಲ್ಲೂಕಿನ ಎರಡು ಕಡೆ ಬೈಕ್ಗಳಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಇಬ್ಬರು ಮೃತಪಟ್ಟು ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಪಟ್ಟಣದ ಜಯನಗರ ಬಡಾವಣೆಯ ಸತೀಶ್(40), ಅನುವಿನಕಟ್ಟೆ-ಕೆರೆಕೋಡಿ ನಿವಾಸಿ ಪ್ರಭಾಕರ್(42) ಮೃತಪಟ್ಟಿದ್ದಾರೆ. ಮಂಡ್ಯದ ತಾವರೆಕೆರೆ ನಿವಾಸಿ ಕಿರಣ್ಕುಮಾರ್ ಎಂಬಾತ ಮದ್ಯ ಸೇವನೆ ಮಾಡಿ ಮಂಡ್ಯ ಕಡೆಯಿಂದ ತನ್ನ ಹೊಸ ಕಾರು ಓಡಿಸಿಕೊಂಡು ಕೆ.ಆರ್.ಪೇಟೆ ಕಡೆಗೆ ಬರುವಾಗ ಘಟನೆ ನಡೆದಿದೆ. ಹೊನ್ನೇನಹಳ್ಳಿ ಗೇಟ್ ಬಳಿ ಬೈಕ್ನಲ್ಲಿ ಬರುತ್ತಿದ್ದ ಸತೀಶ್ ಹಾಗೂ ಪ್ರಭಾಕರ್ ಅವರಿಗೆ ಕಿರಣ್ಕುಮಾರ್ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.
ನಂತರ ಪಟ್ಟಣದ ಎಲ್.ಐ.ಸಿ. ಕಚೇರಿ ಬಳಿ ಬೈಕ್ನಲ್ಲಿ ಹೋಗುತ್ತಿದ್ದ ಶಿವು ಎಂಬುವವರಿಗೆ ಮತ್ತೆ ಡಿಕ್ಕಿ ಹೊಡೆಡಿದ್ದಾನೆ. ಅಲ್ಲಿಂದಲೂ ಪರಾರಿಯಾಗಲು ಯತ್ನಿಸಿದಾಗ ಸಾರ್ವಜನಿಕರು ಆತನನ್ನು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೊನ್ನೇನಹಳ್ಳಿ ಗೇಟ್ ಬಳಿ ತೀವ್ರವಾಗಿ ಗಾಯಗೊಂಡಿದ್ದ ಸತೀಶ್ ಹಾಗೂ ಪ್ರಭಾಕರ್ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ, ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರೂ ಮೃತಪಟ್ಟಿದ್ದಾರೆ. ಎಲ್ಐಸಿ ಕಚೇರಿ ಬಳಿ ಗಾಯಗೊಂಡಿದ್ದ ಶಿವು ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಬ್ಇನ್ಸ್ಪೆಕ್ಟರ್ ಬ್ಯಾಟರಾಯಗೌಡ ಆರೋಪಿ ಆರೋಪಿ ಕಿರಣ್ಕುಮಾರ್ನನ್ನು ಬಂಧಿಸಿ, ಕಾರು ಜಪ್ತಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.