ಮಳವಳ್ಳಿ: ‘ಭಗವಾನ್ ಬುದ್ಧ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ವಿಚಾರಧಾರೆಯನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಭಾರತೀಯ ಬೌದ್ಧ ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷ ದರ್ಶನ್ ಬಿ. ಸೋಮಶೇಖರ್ ಹೇಳಿದರು.
ತಾಲ್ಲೂಕಿನ ಬಾಚನಹಳ್ಳಿ ಬಳಿಯ ಮಿಲಿಂದ ಬುದ್ಧ ವಿಹಾರ ಕೇಂದ್ರದ ಆವರಣದಲ್ಲಿ ಸೋಮವಾರ ಸಂಜೆ ಬುದ್ಧ ಪೂರ್ಣಿಮೆ ಸಂಭ್ರಮಾಚರಣೆ ಅಂಗವಾಗಿ ಆಯೋಜಿಸಿದ್ದ ಬುದ್ಧ ಧಮ್ಮ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಬುದ್ಧರ ಪಂಚಶೀಲ ತತ್ವಗಳ ಪಾಲನೆ ಜೀವನಕ್ಕೆ ದಾರಿದೀಪವಾಗಿವೆ. ಜಗತ್ತಿನಲ್ಲಿ ಶಾಂತಿ ಸಂದೇಶಕ್ಕೆ ಬುದ್ಧಾನುಕರಣೆಯೇ ಶಾಶ್ವತ ಮಾರ್ಗವಾಗಿದೆ. ಮಕ್ಕಳಿಗೆ ಪೋಷಕರು ಒಳ್ಳೆಯ ಸಂಸ್ಕಾರ ನೀಡಬೇಕು. ಯುವ ಸಮೂಹ ದುಶ್ಚಟಗಳಿಂದ ದೂರವಿದ್ದು, ಉತ್ತಮ ಶಿಕ್ಷಣ ಪಡೆಯುವತ್ತ ಗಮನ ಹರಿಸಬೇಕು’ ಎಂದರು.
ಭಾರತದಲ್ಲಿ ಬುದ್ಧ ಧಮ್ಮದ ಉನ್ನತಿ ಮತ್ತು ಅವನತಿ ಕುರಿತು ನಿವೃತ್ತ ಪ್ರಾಂಶುಪಾಲ ಬೆಳಕವಾಡಿ ರಂಗಸ್ವಾಮಿ ಹಾಗೂ ‘ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರಬುದ್ಧ ಭಾರತವನ್ನು ಪ್ರತಿಷ್ಠಾಪಿಸಲು ನಮಗೇಕೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ’ ಎಂಬ ವಿಷಯದ ಬಗ್ಗೆ ಮೈಸೂರಿನ ಸುನಿಲ್ ಕುಮಾರ್ ವಿಷಯ ಮಂಡನೆ ಮಾಡಿದರು.
ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಾರ್ಕಾಲು ನಟರಾಜು, ತಾಲ್ಲೂಕು ಘಟಕದ ಅಧ್ಯಕ್ಷ ವಕೀಲ ಮೋಹನ್ ಕುಮಾರ್, ನಿವೃತ್ತ ವಿಜ್ಞಾನಿ ಚನ್ನಕೇಶವ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.