ಮಂಡ್ಯ: ‘ನಾಡು, ನುಡಿ, ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸುವಂತಹ ಕೆಲಸದಲ್ಲಿ ಆಕಾಶವಾಣಿ ಕೊಡುಗೆ ಮಹತ್ವದ್ದಾಗಿದೆ’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೈಸೂರು ಆಕಾಶವಾಣಿ-90 ಭಾವ ಜನಪದ ರಂಗ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದರು.
ಮೈಸೂರಿನ ಆಕಾಶವಾಣಿಯನ್ನು 1935 ಮನಶಾಸ್ತ್ರದ ಪ್ರೊಫೆಸರ್ ಗೋಪಾಲಸ್ವಾಮಿ ಅವರು ಪ್ರಾರಂಭಗೊಳಿಸಿದರು. ವೈವಿಧ್ಯಮಯ ಮತ್ತು ಗುಣಮಟ್ಟದ ಕಾರ್ಯಕ್ರಮಗಳ ಮೂಲಕ ಆಕಾಶವಾಣಿ ಜನರ ಮನಸ್ಸನ್ನು ಸೆಳೆದಿದೆ ಎಂದರು.
ತಾಂತ್ರಿಕ ಯುಗದಲ್ಲಿ ಆಕಾಶವಾಣಿ ಪ್ರಾತಿನಿಧ್ಯ ಮತ್ತು ಮಹತ್ವ ಕಡಿಮೆ ಆಗಿದೆ ಎನ್ನಿಸುತ್ತಿದೆ. ಆದರೆ ಇಂದು ಸಹ ಆಕಾಶವಾಣಿಯ ಕಾರ್ಯಕ್ರಮಗಳು ಜನಪರ ಕಾರ್ಯಕ್ರಮಗಳಾಗಿವೆ. ವಿಶೇಷವಾಗಿ ಕಲಾವಿದರನ್ನು ಪ್ರೋತ್ಸಾಹಿಸುವಂತಹ ಮತ್ತು ಗ್ರಾಮೀಣ ಬದುಕಿನ ಜನರ ಸೊಗಡಿನ ಕಾರ್ಯಕ್ರಮಗಳು ಹೆಚ್ಚು ಉಪಯುಕ್ತವಾಗಿವೆ ಎಂದರು.
ಕರ್ನಾಟಕದ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ ಗೌಡ, ಮೈಸೂರು ಆಕಾಶವಾಣಿ ಉಪನಿರ್ದೇಶಕ ಉಮೇಶ್ ಎಸ್.ಎಸ್., ಸಹಾಯಕ ನಿರ್ದೇಶಕರಾದ ಟಿ.ವಿ. ವಿದ್ಯಾಶಂಕರ್, ಕೇಶವಮೂರ್ತಿ, ಸಹಾಯಕ ಎಂಜಿನಿಯರ್ ಪಿ. ಆನಂದನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.