ಭಾರತೀನಗರ: ‘ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಕೇವಲ ಒಂದು ವರ್ಗಕ್ಕೆ, ಒಂದು ವಿಚಾರಕ್ಕೆ ಒತ್ತುಕೊಡದೆ ಎಲ್ಲದರಲ್ಲೂ ಜ್ಞಾನ ಸಂಪಾದಿಸಿ, ಅವರು ರಚಿಸಿರುವ ಸಂವಿಧಾನವನ್ನು ವಿಶ್ವವೇ ಒಪ್ಪಿಕೊಂಡಿದೆ’ ಎಂದು ಪೊಲೀಸ್ ಇನ್ಸ್ಪೆಕ್ಟರ್ ಆನಂದ್ ಸ್ಮರಿಸಿದರು.
ಸಮೀಪದ ಚಿಕ್ಕಅರಸಿನಕೆರೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ನಡೆದ ಬುದ್ಧ, ಬಸವ, ಡಾ.ಬಿಆರ್.ಅಂಬೇಡ್ಕರ್ ಜಯಂತಿ ಕಾರ್ರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಂಬೇಡ್ಕರ್ ರಚಿಸಿದ ಸಂವಿಧಾನದ ಎಲ್ಲಾ ವಿಧಿಗಳನ್ನು ವಿಶ್ವ ಸಂಸ್ಥೆಯೇ ಒಪ್ಪಿಕೊಂಡಿದ್ದು, ಇಡೀ ಏಷ್ಯಾ ಖಂಡಕ್ಕೆ ಬೆಳಕು ಚೆಲ್ಲಿದ ಮಹಾಪುರುಷರಾಗಿದ್ದಾರೆ. ದೇಶದಲ್ಲಿ ಎರಡೇ ಪಕ್ಷಗಳು ಸ್ಥಾಪಿತವಾಗಬೇಕೆಂದು ಹೇಳಿದಾಗ ಬಹುಪಕ್ಷಗಳು ಜಾರಿಯಲ್ಲಿದ್ದರೆ ಒಳ್ಳೆಯದು ಎಂದು ಅರ್ಥೈಸಿಸಿ ಬಹುಪಕ್ಷ ಪದ್ಧತಿ ಜಾರಿಗೆ ತಂದರು. ಇದರ ಪ್ರತಿಫಲವೇ ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿವೆ ಎಂದು ಹೇಳಿದರು.
‘ಶಿಕ್ಷಣ, ಅಧಿಕಾರ ಹೊಂದಿದಲ್ಲಿ ಅಸ್ಪೃಷ್ಯತೆ ಹತ್ತಿರವೂ ಸುಳಿಯುವುದಿಲ್ಲ ಎಂದು ಹೇಳಿದರಲ್ಲದೆ, ಶಿಕ್ಷಣವೆಂದರೆ ತನ್ನನ್ನು ತಾನು ಬದಲಾವಣೆ ಮಾಡುವಂತಿರಬೇಕು. ಜೀವನ ಮಾರ್ಗದರ್ಶನದಂತಿರಬೇಕು, ಸಾಮಾಜಿಕ ಜ್ಞಾನ ಇರಬೇಕು ಎಂದು ಸಾರಿದ ಮಹಾಪುರುಷ ಅಂಬೇಡ್ಕರ್’ ಎಂದು ಸ್ಮರಿಸಿದರು.
ಅಂಬೇಡ್ಕರ್ ಸೇವಾ ಟ್ರಸ್ಟ್ನ ಅಧ್ಯಕ್ಷ ಸಿ.ಎಸ್. ಶಿವರಾಜು ಅಧ್ಯಕ್ಷತೆ ವಹಿಸಿದ್ದರು. ಕೆ.ಹೊನ್ನಲಗೆರೆ ಸಹ ಶಿಕ್ಷಕ ಬಿ.ವಿ. ನಾರಾಯಣ್, ಭಾರತೀಯ ಬೌದ್ಧ ಮಹಾಸಭಾದ ಉಪಾಧ್ಯಕ್ಷ ಜಯರಾಮು, ಮುಖಂಡರಾದ ಅಮೀನ್ ಶಿವಲಿಂಗಯ್ಯ, ಶಿವಲಿಂಗಯ್ಯ, ಪ್ರೊ.ಸದಾಶಿವ, ಬಿ.ಅನ್ನದಾನಿ, ಸಿ.ಕೆ. ಶಿವಣ್ಣ, ಚಿಕ್ಕಅರಸಿನಕೆರೆ ಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.