ಮದ್ದೂರು: ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಮತ್ತೊಮ್ಮೆ ರಾಜ್ಯ ಸರ್ಕಾರದಿಂದ ದೊಡ್ಡ ಮೊತ್ತದ ಅನುದಾನ ಸಿಕ್ಕಿದೆ.
ಮದ್ದೂರಮ್ಮನವರ ಕೆರೆಯ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಬೈರನ್ ನಾಲಾ ಹಾಗೂ ವ್ಯದ್ಯನಾಥಪುರ ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು ಕೈಗೊಳ್ಳಲು ಗುರುವಾರ ₹49.50 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿ ರಾಜ್ಯ ಸಚಿವ ಸಂಪುಟ ಘೋಷಿಸಿದೆ.
10 ತಿಂಗಳ ಹಿಂದೆ ಇದೇ ಮದ್ದೂರಮ್ಮನವರ ಕೆರೆ ಅಚ್ಚುಕಟ್ಟು ವ್ಯಾಪ್ತಿಗೆ ಬರುವ 20ಕ್ಕೂ ಹೆಚ್ಚು ಹಳ್ಳಿಗಳ ರೈತ ಜಮೀನುಗಳಿಗೆ ನೀರು ಪೂರೈಕೆ ಮಾಡುವ ಕೆಮ್ಮಣ್ಣು ನಾಲಾ ಆಧುನೀಕರಣ ಕಾಮಗಾರಿಗೆ ₹90 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ನೀರಾವರಿ ಇಲಾಖೆಯ ಮೂಲಕ ನೀಡಿತ್ತು ಹಾಗೂ ಅದಕ್ಕೆ ಸಂಬಂಧಪಟ್ಟಂತೆ ಕಾಮಗಾರಿಯು ನಡೆಯುತ್ತಿದೆ.
‘ಮದ್ದೂರಮ್ಮನವರ ಕೆರೆ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಬೈರನ್ ಹಾಗೂ ವೈದ್ಯನಾಥಪುರ ನಾಲೆಗಳ ಆಧುನೀಕರಣ ಕಾಮಗಾರಿಗೂ ಅನುದಾನ ನೀಡುವಂತೆ ಈ ಮೊದಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಿಗೆ ಪ್ರಸ್ತಾವ ಸಲ್ಲಿಸಿ ಕೋರಲಾಗಿತ್ತು. ಅಂತೆಯೇ ಅದನ್ನು ಪುರಸ್ಕರಿಸಿ ಈಗ ಅನುದಾನವನ್ನು ರಾಜ್ಯ ಸರ್ಕಾರವು ನೀಡಿದೆ. ಇದರಿಂದ ನೂರಾರು ರೈತರಿಗೆ ಅನುಕೂಲವಾಗಲಿದೆ’ ಎಂದು ಶಾಸಕ ಕೆ.ಎಂ ಉದಯ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.