ADVERTISEMENT

ಬೇಬಿಬೆಟ್ಟದಲ್ಲಿ 9 ದಿನಗಳು ನಡೆಯುವ ಜಾತ್ರೆ: ಶಿವಬಸವ ಸ್ವಾಮೀಜಿ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 5:47 IST
Last Updated 16 ಫೆಬ್ರುವರಿ 2026, 5:47 IST
ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಭಾರಿ ದನಗಳ ಜಾತ್ರಾಮಹೋತ್ಸವಕ್ಕೆ ಬೇಬಿಬೆಟ್ಟ ಮಠದ ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ಹಳ್ಳಿಕಾರ್ ಜೋಡೆತ್ತುಗಳಿಗೆ ಹೂವಿನ ಹಾರ ಹಾಕಿ ಚಾಲನೆ ನೀಡಿದರು. ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ.ತಾ.ಪಂ.ಇಒ ವೀಣಾ ಭಾಗವಹಿಸಿದ್ದರು
ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಭಾರಿ ದನಗಳ ಜಾತ್ರಾಮಹೋತ್ಸವಕ್ಕೆ ಬೇಬಿಬೆಟ್ಟ ಮಠದ ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ಹಳ್ಳಿಕಾರ್ ಜೋಡೆತ್ತುಗಳಿಗೆ ಹೂವಿನ ಹಾರ ಹಾಕಿ ಚಾಲನೆ ನೀಡಿದರು. ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ.ತಾ.ಪಂ.ಇಒ ವೀಣಾ ಭಾಗವಹಿಸಿದ್ದರು   

ಪಾಂಡವಪುರ: ತಾಲ್ಲೂಕಿನ ಪ್ರಸಿದ್ಧ ಬೇಬಿಬೆಟ್ಟದ ಭಾರಿ ದನಗಳ ಜಾತ್ರಾ ಮಹೋತ್ಸವಕ್ಕೆ ಮಹಾಶಿವರಾತ್ರಿಯ ದಿನವಾದ ಭಾನುವಾರ ಸಂಜೆ ಚಾಲನೆ ನೀಡಲಾಯಿತು. ಹಳ್ಳಿಕಾರ್ ತಳಿಯ ರಾಸು ಜಾತ್ರೆಯಲ್ಲಿ ಬೀಡುಬಿಟ್ಟಿವೆ.

ಬೇಬಿಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ಮಹಾರಾಜರ ದನಗಳ ಜಾತ್ರಾ ಮಾಳದಲ್ಲಿ ಬೇಬಿಬೆಟ್ಟದ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಅವರು ಮಹದೆಶ್ವೇರ ಸ್ವಾಮಿ ದೇವಸ್ಥಾನಕ್ಕೆ ಹಾಗೂ ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ವಿವಿಧ ಇಲಾಖೆಗಳು ರೈತರಿಗೆ ಮಾಹಿತಿ ನೀಡಲು ಆಯೋಜಿಸಿರುವ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು.

ಬೇಬಿಬೆಟ್ಟದ ದನಗಳ ಜಾತ್ರಾ ಮಹೋತ್ಸವದ ಸಮಿತಿಯು ಫೆ.15ರಿಂದ 23ರವರೆಗೆ ಜಾತ್ರಾ ಮಹೋತ್ಸವನ್ನು ಆಯೋಜಿಸಿದ್ದು, ಸ್ಥಳೀಯ, ಜಿಲ್ಲೆ ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ರಾಸುಗಳು ಬಂದು ಸೇರುತ್ತಿವೆ. ರೈತರಿಗೆ ಮತ್ತು ರಾಸುಗಳಿಗೆ ಕುಡಿಯುವ ನೀರು, ಉಚಿತ ಊಟ, ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಪಶುವೈದ್ಯಕೀಯ ಇಲಾಖೆ, ಆರೋಗ್ಯ ಇಲಾಖೆ ಮತ್ತು ತಾತ್ಕಾಲಿಕ ಪೊಲೀಸ್ ಠಾಣೆ ತೆರೆಯಲಾಗಿದೆ.

ADVERTISEMENT

ರೈತರು ತಮ್ಮ ರಾಸುಗಳೊಂದಿಗೆ ಬಂದು ಸೇರಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ನಿತ್ಯ ಸಂಜೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿದ್ದು, ಉತ್ತಮ ರಾಸುಗಳಿಗೆ ಬಹುಮಾನ ನೀಡಲು ಆಯ್ಕೆ ಸಮಿತಿ ರಚಿಸಲಾಗಿದೆ. ಫೆ.17ರ ಸಂಜೆಯೊಳಗೆ ರಾಸುಗಳ ಮಾಲೀಕರು ಹೆಸರನ್ನು ನೋಂದಾಯಿಸಿಕೊಳ್ಳಲು ಸಮಿತಿ ಮನವಿ ಮಾಡಿದೆ.

ಪ್ಲಾಸ್ಟಿಕ್‌ಮುಕ್ತ ಜಾತ್ರೆ: ಜಾತ್ರೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದು, ಪ್ಲಾಸ್ಟಿಕ್‌ಮುಕ್ತ ಮಾಡಲು ಸಮಿತಿಯು ಕೆಲಸ ಮಾಡುತ್ತಿದೆ. ಹೋಟೆಲ್, ಟೀ, ಕಾಫಿ ಕ್ಯಾಂಟಿನ್‌ಗಳು ಹಾಗೂ ಅಂಗಡಿಗಳು, ರಾಸುಗಳ ಮಾಲೀಕರು ಹಾಗೂ ಹಾಗೂ ಸಾರ್ವಜನಿಕರು ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಲಾಗುತ್ತಿದೆ.

ಕಂಗೊಳಿಸುತ್ತಿರುವ ಬೇಬಿಬೆಟ್ಟ: ಬೇಬಿಬೆಟ್ಟದ ಸಿದ್ದಲಿಂಗೇಶ್ವರ ಮತ್ತು ಮಹದೇಶ್ವ ದೇವಸ್ಥಾನ, ಜಾತ್ರಾ ಮಾಳ,  ರಾಮಯೋಗೀಶ್ವರ ಮಠ ಸೇರಿದಂತೆ ಬೇಬಿಬೆಟ್ಟವು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.

ಉಚಿತ ಊಟ, ತಿಂಡಿ: ಜಾತ್ರೆಯಲ್ಲಿ ಭಾಗವಹಿಸುವ ರೈತರು ಹಾಗೂ ಸಾರ್ವಜನಿಕರಿಗೆ ಮಠದಲ್ಲಿ ಉಚಿತವಾಗಿ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. 

ಉದ್ಫಾಟನೆ ವೇಳೆ ತಾ.ಪಂ.ಇಒ ವೀಣಾ, ಬಿಇಒ ಧರ್ಮಶೆಟ್ಟಿ, ಪೊಲೀಸ್ ಇನ್ಸ್‌ಪೆಕ್ಟರ್ ಲಿಂಗರಾಜು, ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಕಾರ್ಯದರ್ಶಿ ವೈ.ಪಿ.ಮಂಜುನಾಥ್, ಸರ್ವೋದಯ ಕರ್ನಾಟಕ ಪಕ್ಷದ ತಾಲ್ಲೂಕು ಅಧ್ಯಕ್ಷ ಎಸ್.ದಯಾನಂದ, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಚಿಕ್ಕಾಡೆ ಹರೀಶ್, ರಾಘವಪ್ರಕಾಶ್, ಗ್ಯಾರಂಟಿ ಯೋಜನೆ ಸಮಿತಿ ತಾಲ್ಲೂಕು ಅಧ್ಯಕ್ಷ ಎಚ್.ಕೃಷ್ಣೇಗೌಡ, ಕಿಸಾನ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಸಿ.ಆರ್.ರಮೇಶ್, ದಸಂಸ ಮುಖಂಡ ಡಿ.ಕೆ.ಅಂಕಯ್ಯ ಇದ್ದರು.

ಬೇಬಿಬೆಟ್ಟದ ದನಗಳ ಜಾತ್ರೆ ಹೊಸ ಅನುಭವ ತಂದಿದೆ. ಇಷ್ಟರಲ್ಲಿಯೇ ನಿವೃತ್ತನಾಗುವ ನಾನು ದನಗಳನ್ನು ಸಾಕುವ ಮನಸ್ಸು ಮಾಡಿದ್ದೇನೆ. ಮುಂದಿನ ಈ ಜಾತ್ರೆಗೆ ಜೋಡೆತ್ತುಗಳನ್ನು ತರುತ್ತೇನೆ
ಬಸವರಡ್ಡೆಪ್ಪ ರೋಣದ, ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.