ಬೆಳಕವಾಡಿ ಸಮೀಪದ ಹೊಸಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ನರೇಗಾ ಯೋಜನೆಯ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ತಾಲ್ಲೂಕು ಸಾಮಾಜಿಕ ಪರಿಶೋಧನೆ ಸಂಯೋಜಕ ಎನ್.ಪಿ.ಮಹೇಶ್ ಮಾತನಾಡಿದರು
ಬೆಳಕವಾಡಿ: ‘ಒಂದು ವರ್ಷದ ಅವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಮತ್ತು 15ನೇ ಹಣಕಾಸು ಯೋಜನೆಯಡಿ ನಡೆದಿರುವ ಕಾಮಗಾರಿಗಳ ಸ್ಥಳ ಮತ್ತು ಕಡತಗಳನ್ನು ನಮ್ಮ ತಂಡ ಪರಿಶೀಲನೆ ಮಾಡಿ, ಸಭೆಯಲ್ಲಿ ಓದಿ, ಚರ್ಚೆ ಮಾಡುವುದೇ ಗ್ರಾಮ ಸಭೆಯ ಉದ್ದೇಶ’ ಎಂದು ತಾಲ್ಲೂಕು ಸಾಮಾಜಿಕ ಲೆಕ್ಕ ಪರಿಶೋಧನೆ ಸಂಯೋಜಕ ಎನ್.ಪಿ.ಮಹೇಶ್ ತಿಳಿಸಿದರು.
ಬೆಳಕವಾಡಿ ಸಮೀಪದ ಹೊಸಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ನಡೆದ ನರೇಗಾ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪಿಡಿಒ ಎಚ್.ಸಿ.ಕುಮಾರ್ ಮಾತನಾಡಿ, ಪಂಚಾಯಿತಿಯಲ್ಲಿ 1137 ಮಂದಿ ಕೂಲಿ ಕಾರ್ಮಿಕರು ಜಾಬ್ ಕಾರ್ಡ್ ಹೊಂದಿದ್ದಾರೆ. ಪ್ರತಿ ಯೊಬ್ಬರು ಕಡ್ಡಾಯವಾಗಿ ಜಾಬ್ ಕಾರ್ಡ್ ಅನ್ನು ಇಕೆವೈಸಿ ಮಾಡಿಸುವುದು ಅತ್ಯವಶ್ಯ. ತಪ್ಪಿದ್ದಲ್ಲಿ ಜಾಬ್ ಕಾರ್ಡ್ ಸ್ಥಗಿತವಾಗುತ್ತದೆ. ಆ.30ರವರೆಗೂ ಪಂಚಾಯಿತಿಯಲ್ಲಿಯೇ ಇಕೆವೈಸಿ ಮಾಡಲಾಗುತ್ತದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ ಅವರ ಸೂಚನೆಯಂತೆ ಗ್ರಾಮ ಪಂಚಾಯಿತಿಯಲ್ಲಿ ಪ್ರತಿ ಸೋಮವಾರ ಬೆಳಿಗ್ಗೆ 11 ರಿಂದ 1 ಗಂಟೆ ವರೆಗೆ ಕುಂದು ಕೊರತೆ ಸಭೆ ನಡೆಯಲಿದೆ. ಸಾರ್ವಜನಿಕರು ಯಾವುದೇ ಇಲಾಖೆಗೆ ಸಂಬಂಧಿಸಿದ ತಮ್ಮ ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಬಹುದು. ಆಯಾ ಇಲಾಖೆಗಳಿಗೆ ಅರ್ಜಿಯನ್ನು ಕಳುಹಿಸಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಾವು ಶ್ರಮಿಸುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿ ನರೇಗಾ ಯೋಜನೆಯಡಿ 46 ಕಾಮಗಾರಿ ಹಾಗೂ 15ನೇ ಹಣಕಾಸು ಯೋಜನೆಯಲ್ಲಿ ನಡೆದಿರುವ 34 ಕಾಮಗಾರಿಗಳ ಅನುಷ್ಠಾನದ ಪಟ್ಟಿಯನ್ನು ಸಂಪನ್ಮೂಲ ವ್ಯಕ್ತಿ ಶ್ವೇತಾ, ನಂದಿನಿ ಮಂಡಿಸಿದರು.
ಸಭೆಯ ನೋಡಲ್ ಅಧಿಕಾರಿಯಾಗಿ ಹಿರಿಯ ನಾಗರಿಕ ಶಿವಲಿಂಗೇಗೌಡ, ಗ್ರಾ.ಪಂ. ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷ ಆರ್.ಆರ್. ಪ್ರಕಾಶ್, ಸದಸ್ಯರಾದ ಬಿ.ಎಂ. ಮಹದೇವ್, ರಾಜಣ್ಣ, ಸುಮಿತ್ರಾ, ಪುಟ್ಟಮ್ಮ, ಮೀನಾಕ್ಷಿ, ನರೇಗಾ ಎಂಜಿನಿಯರ್ ಸಾತ್ವಿಕ್ ಗೌಡ, ಎಸ್ಡಿಎ ಜಯಲಕ್ಷ್ಮಿ, ಎಚ್.ಎಸ್.ನಾಗೇಂದ್ರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.