ಭಾರತೀನಗರ: ಇಲ್ಲಿಯ ಮಂಡ್ಯ ವೃತ್ತದ ಬಳಿ ದಲಿತ ಸಂಘಟನೆಗಳ ಒಕ್ಕೂಟದಿಂದ 207ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.
ದಸಂಸ ಒಕ್ಕೂಟದ ಕಾರ್ಯಕರ್ತರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಗೌರವ ಸಮರ್ಪಣೆ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕಬ್ಬಾಳಯ್ಯ ಮಾತನಾಡಿ, ‘ಭೀಮಾ ಕೋರೆಗಾಂವ್ ಎಂದರೆ ಸಾರ್ವಜನಿಕರಿಗೆ ಮಾಹಿತಿ ಕಡಿಮೆಯಿದ್ದು, ಮಹರ್ ರೆಜಿಮೆಂಟ್ ಎಂದರೆ ಪರಿಶಿಷ್ಟ ಜನಾಂಗದವರು ಹುಟ್ಟು ಹಾಕಿಕೊಂಡಿದ್ದ ಸೈನ್ಯ. ಇಂತಹ ಮಹರ್ ರೆಜಿಮೆಂಟ್ 500 ಸೈನ್ಯ 1818ರ ಜ. 1ರಂದು ನಡೆದ ಭೀಮಾ ನದಿ ತೀರದಲ್ಲಿ ನಡೆದ ಕೋರೆಗಾಂವ್ ಯುದ್ಧದಲ್ಲಿ 28,000 ಪೇಶ್ವೆ ಸೈನ್ಯದ ವಿರುದ್ಧ ಜಯಗಳಿಸಿದ ದಲಿತ ಸ್ವಾಭಿಮಾನಿ ಸೈನಿಕರ ರಕ್ತ ಚರಿತ್ರೆ ದೇಶದ ಎಲ್ಲರಿಗೂ ತಿಳಿಯಬೇಕಿದೆ. ಹಾಗಾಗಿ ಈ ದಿನವನ್ನು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಗುಡಿಗೆರೆ ಬಸವರಾಜು ಮಾತನಾಡಿ, ‘ಭೀಮಾ ಕೋರೆಗಾಂವ್ ವಿಜಯೋತ್ಸವ ಸಂಕೇತವಾಗಿ ಮಹಾರಾಷ್ಟ್ರದಲ್ಲಿ 500 ಸೈನಿಕರ ನೆನಪಿಗಾಗಿ ಧ್ವಜಸ್ತಂಭ ನಿರ್ಮಿಸಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಪ್ರತಿವರ್ಷ ಜ. 1ರಂದು ಅಸ್ಪೃಶ್ಯರ ವಿಜಯ ದಿನ ಭೀಮಾ ಕೋರೆಗಾಂವ್ ವಿಜಯೋತ್ಸವ ಎಂದು ಆಚರಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.