ADVERTISEMENT

ನಡುಗಡ್ಡೆ ನಾಶ, ಪಕ್ಷಿಗಳು ಪಲಾಯನ

ವಿದ್ಯುತ್‌ ಕಂಪನಿಯಿಂದ ಸರ್ಕಾರದ ನಿಯಮ ಉಲ್ಲಂಘನೆ, ಸ್ಥಳೀಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 3:59 IST
Last Updated 12 ಜನವರಿ 2021, 3:59 IST
ನದಿಗೆ ಒಡ್ಡು ಕಟ್ಟಲು ನಡುಗಡ್ಡೆಯನ್ನು ನಾಶ ಮಾಡಿರುವುದು
ನದಿಗೆ ಒಡ್ಡು ಕಟ್ಟಲು ನಡುಗಡ್ಡೆಯನ್ನು ನಾಶ ಮಾಡಿರುವುದು   

ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಬಳಿ ಕಾವೇರಿ ನದಿಗೆ ಒಡ್ಡು ನಿರ್ಮಿಸಿ 6 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತಿರುವ ಖಾಸಗಿ ಕಂಪನಿ ಸರ್ಕಾರದ ಷರತ್ತುಗಳನ್ನು ಉಲ್ಲಂಘಿಸಿ ನಡುಗಡ್ಡೆ ಮತ್ತು ಕೃಷಿ ಭೂಮಿಯನ್ನು ನಾಶ ಮಾಡಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸೋಹಂ ರಿನಿವೆಬಲ್‌ ಎನರ್ಜಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಗೆ ಕಾಮಗಾರಿ ಅನುಷ್ಠಾನ ಜವಾಬ್ದಾರಿ ನೀಡಲಾಗಿದೆ. ನದಿಯ ಮಧ್ಯೆ ಇದ್ದ ದ್ವೀಪ (ತಿಟ್ಟು)ದ ಸಂರಕ್ಷಣೆ ಮಾಡುವಲ್ಲಿ ಕಂಪನಿ ಸಂಪೂರ್ಣವಾಗಿ ವಿಫಲವಾಗಿದೆ. ನದಿಯ ಎರಡೂ ದಂಡೆಯ ಖಾಸಗಿ ಜಮೀನು ಮುಳುಗಡೆಯಾಗದಂತೆ ತಡೆಗೋಡೆಯನ್ನೂ ನಿರ್ಮಿಸಬೇಕು ಎಂದು ಷರತ್ತು ವಿಧಿಸಲಾಗಿತ್ತು. ಆದರೆ ಷರತ್ತುಗಳನ್ನು ಉಲ್ಲಂಘನೆ ಮಾಡಿರುವ ಕಂಪನಿ ಮೇಲ್ಭಾಗ ಹಾಗೂ ತಳಭಾಗದ ಕೃಷಿ ಜಮೀನುಗಳಿಗೆ ಹಾನಿ ಮಾಡಿದೆ.

ಬೇಸಿಗೆಯಲ್ಲಿ ನೀರು ಹಿಡಿದಿಡದಂತೆ ಸೂಚನೆ ಇದ್ದರೂ ಪಾಲಿಸುತ್ತಿಲ್ಲ. ಸ್ವಯಂ ಚಾಲಿತ ಗೇಟ್‌ಗಳನ್ನು ಅಳವಡಿಸಿಲ್ಲ. ಕಂಪನಿಯ ನಿರ್ಲಕ್ಷ್ಯದಿಂದ 2019ರಲ್ಲಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಒಡ್ಡಿನ ಪಕ್ಕದ ಏರಿ ಒಡೆದು ರೈತರು ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಸಂಬಂಧಿಸಿದ ಕಂಪೆನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ವಿದ್ಯುತ್‌ ಉತ್ಪಾದನೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ಸ್ಥಳೀಯ ರೈತರ ದೂರು ಆಧರಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರು, ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ಗೆ ಸೂಚನೆ ನೀಡಿದ್ದಾರೆ. ತಹಶೀಲ್ದಾರ್‌ ಎಂ.ವಿ. ರೂಪಾ ಈಚೆಗೆ ಸ್ಥಳ ಪರಿಶೀಲನೆ ನಡೆಸಿದ್ದು, ಸರ್ಕಾರಕ್ಕೆ ವಾಸ್ತವ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಸೋಹಂ ಕಂಪೆನಿಯು 6 ಮೆಗಾವಾಟ್‌ ಜಲ ವಿದ್ಯುತ್‌ ಉತ್ಪಾದನೆ ಮಾಡುತ್ತಿದ್ದು, ಅದಕ್ಕಾಗಿ 24 ಚೆಕ್‌ ಗೇಟ್‌ಗಳ ಒಡ್ಡು ಕಟ್ಟಿದೆ. ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸಿದೆ. ನದಿಯ ಸಹಜ ಮಟ್ಟದಿಂದ 8ರಿಂದ 10 ಅಡಿ ಎತ್ತರ ನೀರು ಚೆಕ್‌ ಡ್ಯಾಂನ ಹಿಂದೆ ಜಮಾಯಿಸಿದೆ. ನೀರು ಒಡ್ಡಿನ ಹಿಂದಿನ ಜಮೀನಿಗೆ ಹರಿದು ಶೀತ ಹೆಚ್ಚಾಗಿ ವ್ಯವಸಾಯ ಮಾಡಲಾಗುತ್ತಿಲ್ಲ. ಚೆಕ್‌ ಡ್ಯಾಂಗಾಗಿ ನದಿ ಮಧ್ಯೆ ಇದ್ದ ನಡುಗಡ್ಡೆಯನ್ನು ನಾಶ ಮಾಡಿದೆ. ಅಪರೂಪದ ಮತ್ತಿ, ನೇರಳೆ, ಹೊಳೆ ಮತ್ತಿ, ಬಿದಿರು ಮರಗಳನ್ನು ಹನನ ಮಾಡಿದೆ. ಜಲಚರಗಳೂ ನಾಶ ಹೊಂದಿವೆ. ಇಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಪಕ್ಷಿಗಳು ಪಲಾಯನ ಮಾಡಿವೆ.

‘ಹತ್ತಾರು ಎಕರೆ ವಿಸ್ತೀರ್ಣದ ದ್ವೀಪದಲ್ಲಿದ್ದ ಮಣ್ಣು, ಕಲ್ಲನ್ನು ಎತ್ತುವಳಿ ಮಾಡಿ ಒಡ್ಡಿಗೆ ಬಳಸಿಕೊಳ್ಳಲಾಗಿದೆ. ದ್ವೀಪದಲ್ಲಿದ್ದ ನವಿಲು ಇತರ ಪಕ್ಷಿಗಳು ಪಲಾಯನ ಮಾಡಿವೆ. ಆಸುಪಾಸಿನ ಗ್ರಾಮಗಳ ದನ ಕರುಗಳಿಗೆ ಮೇವಿನ ಮೂಲವಾಗಿದ್ದ ನೈಸರ್ಗಿಕ ನಡುಗಡ್ಡೆ ಸಂಪೂರ್ಣ ನಾಶವಾಗಿದೆ’ ಎಂದು ರೈತ ಚಲುವೇಗೌಡ ಒತ್ತಾಯಿಸಿದರು.

ಮುಳುಗಡೆ ಜಮೀನಿಗೆ ಮೊದಲೆರಡು ವರ್ಷ ಪರಿಹಾರ ನೀಡಿದ ಕಂಪೆನಿ ಈಗ ಯಾವುದೇ ನೆರವು ನೀಡುತ್ತಿಲ್ಲ. ಪ್ರಶ್ನಿಸಿದರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೊಡ್ಡಪಾಳ್ಯ ಗ್ರಾಮದ ರೈತರು ದೂರುತ್ತಾರೆ. ಸ್ಥಳದಲ್ಲಿ ಮೊದಲು ಮೈತ್ರಿ ಎನರ್ಜಿ ಕಂಪನಿ ಹೆಸರಿನಲ್ಲಿ 2 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಘಟಕ ಆರಂಭಿಸಲು ಅನುಮತಿ ಪಡೆದಿತ್ತು. ಈಗ ಕಂಪನಿಯ ಹೆಸರು ಮತ್ತು ಅದರ ಸಾಮರ್ಥ್ಯ ಬದಲಾಗಿದೆ. ಈ ಬಗ್ಗೆಯೂ ತನಿಖೆಯಾಗಬೇಕು ದೊಡ್ಡಪಾಳ್ಯ, ದೊಡ್ಡಿ, ಮಹದೇವಪುರ ಗ್ರಾಮಸ್ಥರು, ಪರಿಸರಪ್ರೇಮಿಗಳು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.