ADVERTISEMENT

ಅರಕೆರೆ ಹೋಬಳಿ ಕೆರೆಗಳಿಗೆ ವರ್ಷಾಂತ್ಯಕ್ಕೆ ಕಾವೇರಿ ನೀರು: ರಮೇಶ ಬಂಡಿಸಿದ್ದೇಗೌಡ

₹120 ಕೋಟಿ ವೆಚ್ಚದ ಯೋಜನೆಗೆ ಚಾಲನೆ: ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 6:31 IST
Last Updated 21 ಫೆಬ್ರುವರಿ 2026, 6:31 IST
ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಗ್ರಾಮದ ಕೆರೆಗೆ ₹35 ಕೋಟಿ ವೆಚ್ಚದಲ್ಲಿ, ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಶುಕ್ರವಾರ ಚಾಲನೆ ನೀಡಿದರು. ಜಿ.ಪಂ. ಮಾಜಿ ಅಧ್ಯಕ್ಷ ಬಿ. ಲಿಂಗಯ್ಯ, ಜಿ.ಪಂ. ಮಾಜಿ ಸದಸ್ಯೆ ಪ್ರಭಾವತಿ ಪ್ರಕಾಶ್, ತಾ.ಪಂ. ಮಾಜಿ ಸದಸ್ಯ ಎನ್.ಪಿ. ಸುರೇಶ್ ಪಾಲ್ಗೊಂಡಿದ್ದರು
ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಗ್ರಾಮದ ಕೆರೆಗೆ ₹35 ಕೋಟಿ ವೆಚ್ಚದಲ್ಲಿ, ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಶುಕ್ರವಾರ ಚಾಲನೆ ನೀಡಿದರು. ಜಿ.ಪಂ. ಮಾಜಿ ಅಧ್ಯಕ್ಷ ಬಿ. ಲಿಂಗಯ್ಯ, ಜಿ.ಪಂ. ಮಾಜಿ ಸದಸ್ಯೆ ಪ್ರಭಾವತಿ ಪ್ರಕಾಶ್, ತಾ.ಪಂ. ಮಾಜಿ ಸದಸ್ಯ ಎನ್.ಪಿ. ಸುರೇಶ್ ಪಾಲ್ಗೊಂಡಿದ್ದರು   

ಶ್ರೀರಂಗಪಟ್ಟಣ: ‘ಮಳೆ ಆಶ್ರಿತ ಪ್ರದೇಶಗಳಾದ ತಾಲ್ಲೂಕಿನ ಅರಕೆರೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಕೆರೆಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸುವ ಪ್ರಕ್ರಿಯೆ ಈ ವರ್ಷದ ಅಂತ್ಯಕ್ಕೆ ಆರಂಭವಾಗಲಿದೆ’ ಎಂದು ಸೆಸ್ಕ್‌ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ತಾಲ್ಲೂಕಿನ ಗಾಮನಹಳ್ಳಿ, ನೇರಲಕೆರೆ, ಕಾಲ್ಕೆರೆ, ಮಾರಸಿಂಗನಹಳ್ಳಿ ಇತರ ಕೆರೆಗಳಿಗೆ ಏತ ನೀರಾವರಿ ಯೋಜನೆಯಡಿ ಕಾವೇರಿ ನದಿಯಿಂದ ನೀರು ತುಂಬಿಸುವ ₹120 ಕೋಟಿ ವೆಚ್ಚದ ಯೋಜನೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಬೇಸಿಗೆ ಕಾಲದಲ್ಲಿ ಅರಕೆರೆ ಹೋಬಳಿಯ ಸಾಕಷ್ಟು ಗ್ರಾಮಗಳಲ್ಲಿ ನೀರಿನ ಬವಣೆ ಉಂಟಾಗುತ್ತಿತ್ತು. ಗಾಮನಹಳ್ಳಿ, ನೇರಲಕೆರೆ, ಮಾರಸಿಂಗನಹಳ್ಳಿ ಮತ್ತು ಕಾಲ್ಕೆರೆ ಗ್ರಾಮದ ಕೆರೆಗಳು ಬತ್ತಿ ಹೋಗುತ್ತಿದ್ದವು. ನೀರಿನ ಸಮಸ್ಯೆ ನೀಗಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಶುಕ್ರವಾರದಿಂದಲೇ ಕಾಮಗಾರಿ ಆರಂಭವಾಗಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಈ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕು ಎಂಬುದು ಬಹು ದಿನಗಳ ಕನಸಾಗಿತ್ತು. ಹಾಗಾಗಿ ಡಿಪಿಆರ್‌ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ರಾಜ್ಯ ಸರ್ಕಾರ ಅಗತ್ಯ ಅನುದಾನ ನೀಡಿದೆ. ಕೆಲವೇ ತಿಂಗಳುಗಳಲ್ಲಿ ಈ ಕೆರೆಗಳಿಗೆ ಕಾವೇರಿ ನದಿಯಿಂದ ನೀರು ಹರಿದು ಬರಲಿದೆ. ಕೊಳವೆ ಬಾವಿಗಳು ಜೀವ ಪಡೆಯಲಿವೆ. ಕೃಷಿಗೆ ಮಾತ್ರವಲ್ಲದೆ ಜನ, ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಕೂಡ ನೀಗಲಿದೆ. ನೀರು ತುಂಬಿಸುವ ಯೋಜನೆಯ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಮುಗಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ’ ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ಬಿ. ಲಿಂಗಯ್ಯ, ಜಿ.ಪಂ. ಮಾಜಿ ಸದಸ್ಯೆ ಪ್ರಭಾವತಿ ಪ್ರಕಾಶ್, ತಾ.ಪಂ. ಮಾಜಿ ಸದಸ್ಯ ಎನ್‌.ಪಿ. ಸುರೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಮಹೇಶ್, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಇಮ್ರಾನ್‌ಖಾನ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎನ್‌. ಈಶ್ವರ್‌, ಸಹಾಯಕ ಎಂಜಿನಿಯರ್‌ ಕಿರಣ್‌, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಜಸ್ವಂತ್, ಸಹಾಯಕ ಎಂಜಿನಿಯರ್‌ ಯತೀಶ್ ಇದ್ದರು.

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ತಾಲ್ಲೂಕಿನ ಅರಕೆರೆ ಗ್ರಾಮದ ತೆನೆಕಟ್ಟೆ ಹಳ್ಳಕ್ಕೆ ಚೆಕ್‌ ಡ್ಯಾಂ ನಿರ್ಮಿಸುವ ₹3.87 ಕೋಟಿ ವೆಚ್ಚದ ಕಾಮಗಾರಿ ಗಾಮನಹಳ್ಳಿಯಲ್ಲಿ ₹4.30 ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಸೆಸ್ಕ್‌ ಇಲಾಖೆ ವತಿಯಿಂದ ಗಾಮನಹಳ್ಳಿಯಲ್ಲಿ ₹50 ಲಕ್ಷ ವೆಚ್ಚದ ಮಾದರಿ ಯೋಜನೆಗೂ ರಮೇಶ ಬಂಡಿಸಿದ್ದೇಗೌಡ ಶುಕ್ರವಾರ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.