ಶ್ರೀರಂಗಪಟ್ಟಣ: ತಾಲ್ಲೂಕಿನ ಗಣಂಗೂರು ಬಳಿ ಮಂಗಳವಾರ ಮಧ್ಯಾಹ್ನ ಕುರಿಗಾಹಿಗಳ ಕಣ್ಣೆದುರೇ ಚಿರತೆಯೊಂದು ಕುರಿಯ ಮೇಲೆ ದಾಳಿ ನಡೆಸಿದೆ.
ಗಣಂಗೂರು– ಸಿದ್ದಾಪುರ ಮಧ್ಯೆ ಅರಣ್ಯದಂಚಿನಲ್ಲಿ ಚಿರತೆ ಕುರಿಯ ಮೇಲೆ ದಿಢೀರ್ ದಾಳಿ ನಡೆಸಿದೆ. ಕುರಿಯ ಕತ್ತು ಕಚ್ಚಿ ಎಳೆದೊಯ್ಯುತ್ತಿದ್ದ ಚಿರತೆಯನ್ನು ಕುರಿ ಮೇಯಿಸುತ್ತಿದ್ದ ಮೂರ್ನಾಲ್ಕು ಮಂದಿ ಬಡಿಗೆ ಹಿಡಿದು ಓಡಿಸಿದ್ದಾರೆ. ಚಿರತೆಯ ದಾಳಿಯಿಂದ ಗಾಯಗೊಂಡಿದ್ದ ಕುರಿ ಸಂಜೆ ವೇಳೆಗೆ ಮೃತಪಟ್ಟಿದೆ.
‘ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಾಂಪೌಂಡ್ ಪಕ್ಕದಲ್ಲೇ ಚಿರತೆ ಕುರಿ ಹಿಂಡಿನ ಮೇಲೆ ದಾಳಿ ನಡೆಸಿತು. ಆರಂಭದಲ್ಲಿ ಗಾಬರಿಯಾದರೂ ನಂತರ ಧೈರ್ಯದಿಂದ ಅದನ್ನು ಓಡಿಸಿದೆವು’ ಎಂದು ಕುರಿಗಾಹಿಗಳಾದ ನಂದೀಶ್, ಯೋಗೇಶ್ ತಿಳಿಸಿದ್ದಾರೆ.
ಗಣಂಗೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪ 15 ದಿನಗಳ ಹಿಂದೆಯೂ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಬೋನು ತಂದಿರಿಸಿದೆ. ಆದರೆ, ಅದರಲ್ಲಿ ಬಲಿ ಪ್ರಾಣಿಯನ್ನು ಕಟ್ಟಿ ಹಾಕಿಲ್ಲ. ಹಾಗಾಗಿ ಚಿರತೆ ಬೋನಿಗೆ ಬೀಳುತ್ತಿಲ್ಲ. ಹಗಲು ಹೊತ್ತಿನಲ್ಲೇ ಚಿರತೆ ಕುರಿ ಮೇಲೆ ದಾಳಿ ನಡೆಸಿರುವುದರಿಂದ ಶಾಲೆಯ ವಿದ್ಯಾರ್ಥಿಗಳು, ರೈತರು ಹಾಗೂ ಕುರಿಗಾಹಿಗಳಲ್ಲಿ ಆತಂಕ ಹೆಚ್ಚಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬೀರೇಶ್ ಕಳವಳ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.