
ಭಾರತೀನಗರ: ಸಿ.ಎಂ ಬದಲಾವಣೆ ವಿಷಯ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಆ ವಿಚಾರವಾಗಿ ನಾನು ಏನನ್ನು ಹೇಳಲು ಬಯಸುವುದಿಲ್ಲ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ಹೇಳಿದರು.
ಸಮೀಪದ ದೊಡ್ಡಅರಸಿನಕೆರೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿರುವ ದಿ.ಅಂಬರೀಷ್ ಅವರ ಪುತ್ಥಳಿ ಅನಾವರಣ, ಅಂಬಿ ರಂಗಮಂದಿರದ ಉದ್ಘಾಟನೆ, ಗಜೇಂದ್ರ ಕೇರ್ ಆಫ್ ದೊಡ್ಡರಸಿನಕೆರೆ ಚಲನ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಪಕ್ಷದಲ್ಲಿ ಎದ್ದಿರುವ ಸಿ.ಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ವಿಚಾರದಲ್ಲಿ ಒಳಗೆ ಯಾವ ಗುದ್ದಾಟ ನಡೆಯುತ್ತಿದೆ ಎಂಬುದೂ ಕೂಡ ತಿಳಿದಿಲ್ಲ. ಮಾಧ್ಯಮದಲ್ಲಿ ಬರುತ್ತಿರುವ ಸುದ್ದಿಯನ್ನಷ್ಟೇ ನೋಡಿದ್ದೇನೆ’ ಎಂದರು.
‘ಕಾಂಗ್ರೆಸ್ನಲ್ಲಿನ ಆಂತರಿಕ ಗುದ್ದಾಟ ಗಮನಿಸುತ್ತಿದ್ದರೆ ನವೆಂಬರ್ ನಂತರ ರಾಜ್ಯದಲ್ಲಿ ಕ್ರಾಂತಿಯಾಗುವುದಂತೂ ಖಚಿತ. ಅದು ಹೇಗೆ, ಏನೂ ಎಂಬುದನ್ನು ಕಾದುನೋಡಬೇಕು. ನಮಗಂತೂ ಯಾವುದೇ ಹುದ್ದೆ, ಸ್ಥಾನಮಾನದ ಮೇಲೆ ಆಸಕ್ತಿಯಿಲ್ಲ. ಅದಕ್ಕಾಗಿ ಆಸೆಪಡುವುದೂ ಇಲ್ಲ. ಆ ರೀತಿಯ ಆಸೆಯಿದ್ದಿದ್ದರೆ ನನ್ನ ಹೆಜ್ಜೆಯೇ ಬೇರೆ ಇರುತ್ತಿತ್ತು. ಇಂಡಿಪೆಂಡೆಂಟ್ ಎಂ.ಪಿ ಸ್ಪರ್ಧೆ ವೇಳೆಯೇ ಎಂಎಲ್ಸಿ ಆಫರ್ ಇತ್ತು. ಅದನ್ನೆ ತಿರಸ್ಕರಿಸಿದವಳು ನಾನು’ ಎಂದು ಸ್ಪಷ್ಟಪಡಿಸಿದರು.
‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದ್ದು, ಅಭಿವೃದ್ಧಿ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಸಿಎಂ, ಡಿಸಿಎಂ, ಸಚಿವರು, ಶಾಸಕರು ಆಸಕ್ತಿ ಕಳೆದುಕೊಂಡಿದ್ದಾರೆ ಎನಿಸುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಪ್ರತಿ ದಿನ ಕಸರತ್ತು ನಡೆಸಲಷ್ಟೇ ಸೀಮಿತರಾಗಿದ್ದಾರೆ’ ಎಂದು ಟೀಕಿಸಿದರು.
ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಭಿಷೇಕ್ ಅಂಬರೀಶ್ ಮಾತನಾಡಿದರು. ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಣಿ, ಅಂಬರೀಶ್ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಪ್ರೊ.ಮಾಯಪ್ಪ, ಜಿ.ಪಂ ಮಾಜಿ ಸದಸ್ಯ ಬಿ.ಬಸವರಾಜು, ಕಾಂಗ್ರೆಸ್ ಮುಖಂಡ ಕೆ.ಎಂ.ರವಿ, ಗಜೇಂದ್ರ ಕೇರ್ ಆಫ್ ದೊಡ್ಡರಸಿನಕೆರೆ ಚಿತ್ರ ತಂಡದ ವೇದ, ನಿರೀಕ್ಷಾ, ತಿಮ್ಮರಾಜು, ಮಂಜುಳಾ ರುದ್ರೇಗೌಡ, ಲತಾಶೇಖರ್, ಶಿವಲಿಂಗೇಗೌಡ, ಶಿವಣ್ಣ, ಪರಶಿವ, ಸಂತೋಷ್ ಗವಿ, ಸುಜಾತ ಪುಟ್ಟು, ರುದ್ರೇಗೌಡ, ಸಿದ್ದಾಂತ್ಸಾಗರ್, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.